ವಿಟ್ಲ: ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರೊಂದಿಗೆ ಅನುಚಿತವಾಗಿ ವರ್ತಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಲು ಪದಾರ್ಥ ಸೇವಿಸಿ ಧ್ವಿಚಕ್ರ ವಾಹನವನ್ನು ಚಲಾಯಿಸಿದ ಯುವಕನೋರ್ವನನ್ನು ವಿಟ್ಲ ಠಾಣಾ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಟ್ವಾಳ ತಾಲೂಕು ಕೊಳ್ನಾಡು ನಿವಾಸಿ ಮಹಮ್ಮದ್ ಅಸ್ಬೀರ್ (26 ವ.) ಬಂಧಿತ ಆರೋಪಿ.
ಮೇ.೩ರಂದು ಮಧ್ಯಾಹ್ನದ ವೇಳೆ ವಿಟ್ಲ ಠಾಣಾ ಎಸ್.ಐ. ಬಿ ಎಸ್ ನಾಯಕ್ ರವರು ಸಿಬ್ಬಂದಿಗಳೊಂದಿಗೆ ವಿಟ್ಲ ನಾಲ್ಕು ಮಾರ್ಗ ಜಂಕ್ಷನ್ ನಲ್ಲಿ ವಾಹನ ತಪಾಸಣೆ ನಡೆಸುತ್ತಿರುವಾಗ, ಅದೇ ದಾರಿಯಾಗಿ ಬಂದ ದ್ವಿಚಕ್ರ ವಾಹನದಲ್ಲಿ ಅದರ ಸವಾರ ಹೆಲ್ಮೇಟ್ ಧರಿಸದೇ ವಾಹನ ಚಲಾಯಿಸಿಕೊಂಡು ಬರುತ್ತಿರುವುದು ಕಂಡುಬಂದಿತ್ತು. ಕೂಡಲೇ ಆತನನ್ನು ತಡೆದು ನಿಲ್ಲಿಸಿ ವಿಚಾರಣೆ ನಡೆಸಿದಾಗ ಆತ ಎಸ್.ಐ. ಬಿ.ಎಸ್.ನಾಯಕ್ರವರೊಂದಿಗೆ ಅನುಚಿತವಾಗಿ ವರ್ತಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದ. ಆತನ ವರ್ತನೆಯಿಂದ ಸಂಶಯಗೊಂಡ ಪೊಲೀಸರು ಆತ ಅಮಲು ಪದಾರ್ಥ ಸೇವಿಸಿರುವ ಬಗ್ಗೆ ಸಂಶಯಗೊಂಡು ಈ ಬಗ್ಗೆ ವಿಚಾರಿಸಿದಾಗ ಆತ ಅಮಲು ಪದಾರ್ಥ ಸೇವಿಸಿರುವುದಾಗಿ ಒಪ್ಪಿಕೊಂಡಿದ್ದ. ಬಳಿಕ ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಆತ ಮಾದಕವಸ್ತು ಸೇವನೆ ನಾಡಿರುವುದು ಧೃಢಪಟ್ಟಿತ್ತು. ಆರೋಪಿಯನ್ನು ಬಂಧಿಸಿರುವ ವಿಟ್ಲ ಠಾಣಾ ಪೊಲೀಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.


