ಹುಣಸೂರು.ಮೇ. 08.ಹನಗೋಡು ಹೋಬಳಿಯ ವಡ್ಡಂಬಾಳು ಗ್ರಾಮದ ರೈತ ಸಿದ್ದರಾಜು ಬಿನ್ ಕಗ್ಲಿನಾಯಕ ರವರು ಸಾಲ ಭಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿದ್ದರಾಜು ರವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಮೃತ ಸಿದ್ದರಾಜು SBI ಬ್ಯಾಂಕ್ ಸೇರಿದಂತೆ ಇತರೆ ಕೈ ಸಾಲವಾಗಿ 15 ಲಕ್ಷ ರೂ ಗೂ ಹೆಚ್ಚು ಸಾಲ ಮಾಡಿದ್ದು, ಬೆಳೆದ ತಂಬಾಕು ಬೆಳೆ ಹಾಗೂ ಶುಂಠಿ ಬೆಳೆಗೆ ಸರಿಯಾದ ಬೆಲೆ ಸಿಗದೇ ಸಾಲ ಭಾಧೆಯ ಸುಳಿಗೆ ಸಿಲುಕಿದ್ದು ಸಾಲ ತೀರಿಸಲಾಗದೇ ಮನ ನೊಂದು ಅವರ ಜಮೀನಿನ ಮರವೊಂದಕ್ಕೆ ನೇಣಿ ಬಿಗಿದು ಸಾವನ್ನಪ್ಪಿದ್ದಾರೆ.
ಗ್ರಾಮಕ್ಕೆ ಮಾಜಿ ಶಾಸಕ ಎಚ್ ಪಿ ಮಂಜುನಾಥ್ ರವರು ಭೇಟಿ ನೀಡಿ ಸಾಲ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡ ರೈತ ಸಿದ್ದರಾಜು ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ನೊಂದ ಕುಟುಂಬಕ್ಕೆ ಸರ್ಕಾರದಿಂದ ಸಿಗುವ ಎಲ್ಲಾ ರೀತಿಯ ಪರಿಹಾರವನ್ನು ಕೂಡಲೇ ಮಂಜೂರು ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಫೋನ್ ಮೂಲಕ ಉಪವಿಭಾಗಾಧಿಕಾರಿ , ತಹಸಿಲ್ದಾರ್ ಹಾಗೂ ಡಿ ವೈ ಎಸ್ ಪಿ ರವರಿಗೆ ಮನವಿ ಮಾಡಿ ಮೃತರ ಕುಟುಂಬಕ್ಕೆ ವೈಯಕ್ತಿಕವಾಗಿ ಸಹಾಯಹಸ್ತ ನೀಡುವುದಾಗಿ ಭರವಸೆ ನೀಡಿದರು.