ಉಡುಪಿ: ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಾಗೂ ‘ಆಟಿಡೊಂಜಿ ವಿಪ್ರಕೂಟ’ ಸಾಂಸ್ಕೃತಿಕ ಹಬ್ಬ ಆ. 15ರಂದು ಕನ್ನರ್ಪಾಡಿ ಶ್ರೀದೇವಿ ಸಭಾಭವನದಲ್ಲಿ ನಡೆಯಲಿದೆ ಎಂದು ಮಹಾಸಭಾ ತಾಲೂಕು ಅಧ್ಯಕ್ಷ ಶ್ರೀಕಾಂತ್ ಉಪಾಧ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನಡೆಯಲಿದ್ದು, 9.15ಕ್ಕೆ ಸಭಾ ಕಾರ್ಯಕ್ರಮ ಜರುಗಲಿದೆ. ಇದೇ ಸಂದರ್ಭದಲ್ಲಿ ಭಾರತೀಯ ಯೋಧರನ್ನು ಗೌರವಿಸಿ ಸನ್ಮಾನಿಸಲಾಗುವುದು ಎಂದರು.

ವಿದ್ವಾನ್ ಡಾ. ಬಿ. ಗೋಪಾಲ ಆಚಾರ್ಯ, ಕರ್ನಾಟಕ ಬ್ಯಾಂಕ್ ನಿರ್ದೇಶಕ ಎಸ್. ಬಾಲಕೃಷ್ಣ ಆಲ್ಸೆ, ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಧ್ಯಾಪಕ ವಿ. ಕೃಷ್ಣರಾಜ ಕುತ್ಪಾಡಿ ಹಾಗೂ ವೈದ್ಯ ಡಾ. ಟಿ. ಶ್ರೀಧರ ಬಾಯರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ಬೆಳಿಗ್ಗೆ 10.30ರಿಂದ ಮಧ್ಯಾಹ್ನ 12.30ರವರೆಗೆ ವಿವಿಧ ತಂಡಗಳಿಂದ ಸಮೂಹ ನೃತ್ಯ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಸಮಾರೋಪ ಸಮಾರಂಭ ಹಾಗೂ 1 ಗಂಟೆಗೆ ಸಾಂಪ್ರದಾಯಿಕ ಆಟಿಯ ಸಹಭೋಜನ ಏರ್ಪಡಿಸಲಾಗಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರಾಹ್ಮಣ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಕೆ. ದುರ್ಗಾಪ್ರಸಾದ್ ಭಾರ್ಗವ್, ಕೋಶಾಧಿಕಾರಿ ಹಯವದನ ಭಟ್, ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಹಾಗೂ ರಾಜೇಂದ್ರ ಎಂ.ಎನ್. ಉಪಸ್ಥಿತರಿದ್ದರು.

