ಸಂಸದರ ಕಚೇರಿ, ಎಂಎಸ್‌ಇಜೆಡ್ಎಲ್ ವತಿಯಿಂದ ವಿಶೇಷ ಚೇತನರಿಗೆ ಅತ್ಯಾಧುನಿಕ ವೀಲ್‌ಚೇರ್‌ಗಳ ವಿತರಣೆ

ಮಂಗಳೂರು: ವಿಶೇಷ ಚೇತನರಿಗೆ ಅತ್ಯಾಧುನಿಕ ಎಲೆಕ್ಟ್ರಿಕ್ ವೀಲ್‌ಚೇರ್ ಸಹಿತ ಅಗತ್ಯ ಸಾಧನಾ ಸಲಕರಣೆಗಳ ವಿತರಣಾ ಕಾರ್ಯಕ್ರಮವು ದಕ್ಷಿಣ ಕನ್ನಡ ಸಂಸದರ ಕಚೇರಿಯಲ್ಲಿ ಇಂದು ನಡೆಯಿತು.

ಕ್ಷೇತ್ರದ ಸಂಸದರಾದ ಕ್ಯಾ. ಬ್ರಿಜೇಶ್ ಚೌಟ ಅವರು ವಿಶೇಷ ಚೇತನ ಫಲಾನುಭವಿಗಳಿಗೆ ಅತ್ಯಾಧುನಿಕ ಎಲೆಕ್ಟ್ರಿಕ್ ವೀಲ್‌ಚೇರ್‌ಗಳು ಹಾಗೂ ಇತರ ಸಾಧನಗಳನ್ನು ವಿತರಿಸಿದ್ದಾರೆ. ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ ಅವರ ಉಪಸ್ಥಿತಿಯಲ್ಲಿ ಅರ್ಹ ಫಲಾನುಭವಿಗಳಿಗೆ ಈ ಫಲಾನುಭವಿಗಳಿಗೆ ಹಸ್ತಾಂತರ ಮಾಡಲಾಗಿದೆ.

ಸಂಸದ ಕ್ಯಾ. ಚೌಟ ಅವರ ವಿಶೇಷ ಮನವಿಗೆ ಸ್ಪಂದಿಸಿರುವ ಮಂಗಳೂರು ಎಸ್‌ಇಜೆಡ್ ಲಿಮಿಟೆಡ್(MSEZL) ಸಂಸ್ಥೆಯು ತನ್ನ 2025-26ನೇ ಸಾಲಿನ ಸಿಎಸ್ಆರ್ (CSR) ಯೋಜನೆಯಡಿ ಈ ಉಪಯುಕ್ತ ಸಾಧನಗಳನ್ನು ಒದಗಿಸಿ ವಿಶೇಷಚೇತನರ ಬಾಳಿಗೆ ಆಸರೆಯಾಗಿದೆ. ಅಂಗ ವೈಕಲ್ಯ ಹೊಂದಿರುವ ಫಲಾನುಭವಿಗಳ ದೈನಂದಿನ ಓಡಾಟಗಳಿಗೆ ಅನುಕೂಲ ಕಲ್ಪಿಸಲು ಒಟ್ಟು ಅತ್ಯಾಧುನಿಕ ಆರು ಎಲೆಕ್ಟ್ರಿಕ್ ವೀಲ್‌ಚೇರ್‌ಗಳು, ಗಾಲಿಕುರ್ಚಿಯನ್ನು ಸ್ಕೂಟರ್ ಆಗಿ ಪರಿವರ್ತಿಸುವ ಒಂದು ‘ನಿಯೋ ಫ್ಲೈ ಮತ್ತು ನಿಯೋ ಬೋಲ್ಟ್’ ಸಾಧನ ಹಾಗೂ ಒಂದು ಅತ್ಯಾಧುನಿಕ ‘ಎಂಡೋಲೈಟ್ ಸೈಮ್ಸ್ ಪ್ರೊಸ್ಥೆಸಿಸ್’ (ಕೃತಕ ಕಾಲು) ಅನ್ನು ಸಂಸದರ ಶಿಫಾರಸ್ಸಿನಂತೆ ಎಸ್‌ಇಜೆಡ್ ಒದಗಿಸಿದ್ದು, ಅದನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, “ವಿಶೇಷ ಚೇತನರು ಸಮಾಜದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಇಂಥಹ ಸಲಕರಣೆಗಳ ನೆರವು ಬಹಳ ಮುಖ್ಯವಾಗಿದೆ. ನಮ್ಮ ಮನವಿಯನ್ನು ಪುರಸ್ಕರಿಸಿ ಜಿಲ್ಲೆಯ ಫಲಾನುಭವಿಗಳಿಗೆ ಅತ್ಯುನ್ನತ ಗುಣಮಟ್ಟದ ಆಧುನಿಕ ಸಾಧನಗಳನ್ನು ಒದಗಿಸಿದ MSEZL ಸಂಸ್ಥೆಯ ಕಾರ್ಯ ಶ್ಲಾಘನೀಯ ಹಾಗೂ ಮಾದರಿಯಾಗಿದೆ” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಎಂಎಸ್‌ಇಜೆಡ್ಎಲ್ ಸಂಸ್ಥೆಯ ಸಿಇಓ ಸೂರ್ಯನಾರಾಯಣ್, ಹೆಡ್ ಆಪರೇಷನ್ಸ್ ಈಟಾ ಶ್ರೀನಿವಾಸಲು, ಪಣಿಭೂಷಣ್, ಯೋಗೀಶ್ , ಜಯಪ್ರಕಾಶ್ ಸೂರಿಂಜೆ ಮುಂತಾದವರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!