ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಯುವಶಕ್ತಿ ಸೇವಾಪಥ ಘಟಕದ ವತಿಯಿಂದ, ಟೀಮ್ ಸನಾತನ್ ಮಂಗಳೂರು ಆಶ್ರಯದಲ್ಲಿ 4ನೇ ವಾರ್ಷಿಕ ಕಾರ್ಯಕ್ರಮವು ಜೂನ್ 22ರಂದು ಉರ್ವದ ಶ್ರೀ ಮಾರಿಯಮ್ಮ ಸಭಾಭವನದಲ್ಲಿ ಬೆಳಿಗ್ಗೆ 9.30ರಿಂದ ವಿವಿಧ ಸೇವಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಟೀಮ್ ಸನಾತನ್ ಮಂಗಳೂರು ಅಧ್ಯಕ್ಷ ಸಾಯಿ ಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮವು ಬೆಳಿಗ್ಗೆ 9.30ಕ್ಕೆ ರಕ್ತದಾನ ಶಿಬಿರದೊಂದಿಗೆ ಆರಂಭವಾಗಲಿದೆ. ಸಂಜೆ 4 ಗಂಟೆಯಿಂದ ಕೀರ್ತನ್ ನಾಯ್ಕ್ ಮಡೂರು ಬಳಗದವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಸಂಜೆ 5.30ರಿಂದ 20ಕ್ಕೂ ಹೆಚ್ಚು ಅಶಕ್ತ ಕುಟುಂಬಗಳಿಗೆ ಸೇವಾನಿಧಿ ಹಸ್ತಾಂತರ, ಸೇವಾಸಾಧಕರಿಗೆ ಗೌರವ, ವಿವಿಧ ಸೇವಾ ಸಂಸ್ಥೆಗಳಿಗೆ ಅಭಿನಂದನೆ ಹಾಗೂ ಮಿತ್ರ ಸಂಸ್ಥೆಗಳಿಗೆ ಪುರಸ್ಕಾರ ಪ್ರದಾನ ನಡೆಯಲಿದೆ ಎಂದರು.
ಇದೇ ವೇಳೆ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ನೀಲಾಶ್ರೀ ಕಲಾವಿದರು ವಾಮದಪದವು ತಂಡದ ವತಿಯಿಂದ 40ಕ್ಕೂ ಹೆಚ್ಚು ಕಲಾವಿದರಿಂದ “ಅಪ್ಪೆ ಭ್ರಮರಿ” ಎಂಬ ತುಳುನಾಡಿನ ಕಥಾನಿರೂಪಣೆ ಹಾಗೂ ನೃತ್ಯ ಪ್ರದರ್ಶನ ನಡೆಯಲಿದೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಯುವಶಕ್ತಿ ಸೇವಾಪಥ ಘಟಕದ ಪ್ರಮುಖರಾದ ಕಾರ್ತಿಕ್ ಶೆಟ್ಟಿ ಬರ್ಕೆ, ದೀಪಕ್ ಸಾಲಿಯಾನ್, ದೀಕ್ಷಿತ್ ಕುಲಾಲ್, ಕಾರ್ತಿಕ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.