ಮೂಡುಬಿದಿರೆ ಪೊಲೀಸ್ ಇನ್ಸೆಕ್ಟರ್ ಸಂದೇಶ್ ಅವರು ನನಗೆ, ನನ್ನ ಅಕ್ಕನ ಮಗ ಹಾಗೂ ನನ್ನ ಮಗನಿಗೆ ಮಾನಸಿಕ ಹಿಂಸೆ, ಜೀವಹಾನಿ ಬೆದರಿಕೆ, ಮಾನ ಹಾನಿ ಹಾಗೂ ಲೈಂಗಿಕ ಕಿರುಕುಳ ನೀಡಿದ್ದಾರೆ. ಸದ್ಯ ಅಮಾನತ್ತಿನಲ್ಲಿರುವ ಇನ್ಸೆಕ್ಟರ್ ಸಂದೇಶ್ ಅವರನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಕಾರ್ಕಳದ ಸುಮತಿ ನಾಯಕ್ ಆಗ್ರಹಿಸಿದ್ದಾರೆ .
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಸಹೋದರಿ ಪ್ರಫುಲ್ಲ ಅವರ ಸಹಕಾರದಿಂದ ನಮ್ಮವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಿದರು.
ಈ ಸಂಬಂಧವಾಗಿ ಅಕ್ಕನ ಮಗನೇ ತಮಗಾದ ಅನ್ಯಾಯದ ವಿರುದ್ಧ ಕಾನೂನು ಪ್ರಾಧಿಕಾರದಲ್ಲಿ ದೂರು ಸಲ್ಲಿಸಿದ್ದು, ಮಾನ್ಯ ನ್ಯಾಯಾಲಯದ ನ್ಯಾಯಾಧೀಶರು ಇನ್ಸ್ಪೆಕ್ಟರ್ ವಿರುದ್ಧ ಎಫ್ಐಆರ್ ದಾಖಲಿಸಲು ನಿರ್ದೇಶಿಸಿದ್ದಾರೆ. ಆದರೆ ಇನ್ಸ್ಪೆಕ್ಟರ್ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ತಿಳಿಸಿದರು .
ಕೆಲ ದಿನಗಳ ಹಿಂದೆ ಪತ್ರಿಕಾಗೋಷ್ಠಿ ಕರೆದ ಪ್ರಫುಲ್ಲ ಅವರು ನನ್ನ ಬಗ್ಗೆ ಹೇಳಿದ ಎಲ್ಲಾ ಮಾತುಗಳು ಸುಳ್ಳುಗಳಾಗಿವೆ. ಇದರ ಬಗ್ಗೆ ದಾಖಲೆಗಳನ್ನು ನಾನು ಒದಗಿಸುವುದಾಗಿ ಹೇಳಿದರು.
ಇನ್ಸ್ಪೆಕ್ಟರ್ ಸಂದೇಶ್ ಅವರ ಮೊಬೈಲ್ ಪರಿಶೀಲನೆ, ಬ್ಯಾಂಕ್ ಸ್ಟೇಟ್ಮೆಂಟ್ ಹಾಗೂ ಅವರ ಐಬಿ ಗುಂಪಿನಲ್ಲಿ ಇರುವ ಎಲ್ಲಾ ಸಂಪರ್ಕಗಳ ಮೇಲೂ ತನಿಖೆ ನಡೆಯಬೇಕು. ಹಾಗೆಯೇ ಪ್ರಫುಲ್ಲ ಅವರ ಮೊಬೈಲ್ ಮತ್ತು ಬ್ಯಾಂಕ್ ಸ್ಟೇಟ್ಮೆಂಟ್ಗಳನ್ನೂ ಪರಿಶೀಲಿಸಬೇಕು ಎಂದು ಅವರು ಆಗ್ರಹಿಸಿದರು.