ಸೌತ್ ಕೆನರಾ ಫಿಸಿಯೋಥೆರಫಿ ಟೀಚರ್ಸ್ ಅಸೋಸಿಯೇಶನ್ ವತಿಯಿಂದ ಎ.10 ಮತ್ತು 11ರಂದು ಅಂತಾರಾಷ್ಟ್ರೀಯ ಭೌತ ಚಿಕಿತ್ಸೆಯ ಸಮ್ಮೇಳನ ‘ಮಂಗಳೂರು ಫಿಸಿಯೋಕಾನ್-2026’ ಕಾರ್ಯಕ್ರಮ ನಗರದ ಟಿ.ಎಂ.ಎ. ಪೈ ಸಭಾಂಗಣದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಅಲೈಡ್ ಮತ್ತು ಹೆಲ್ತ್ ಕೇರ್ ಕೌನ್ಸಿಲ್ ನ ಅಧ್ಯಕ್ಷ ಡಾ.ಯು.ಟಿ. ಇಫಿಕಾರ್ ಫರೀದ್ ತಿಳಿಸಿದರು .
ಅವರು ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ , ಎ.10ರಂದು ಬೆಳಗ್ಗೆ 9 ಗಂಟೆಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಆರ್. ಪಾಟೀಲ್ ಉದ್ಘಾಟಿಸಲಿದ್ದು, ವಿಧಾನಸಭೆಯ ಸ್ವೀಕರ್ ಯು.ಟಿ. ಖಾದರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ತಿಳಿಸಿದರು .
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಮುಖ್ಯ ಭಾಷಣ ಮಾಡಲಿದ್ದಾರೆ. ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದ ಕುಲಪತಿ ಡಾ. ಭಗವಾನ್ ಬಿ.ಸಿ., ಅಲೈಡ್ ಮತ್ತು ಹೆಲ್ತ್ ಕೇರ್ ಪ್ರೊಫೆಷನ್ನ ರಾಷ್ಟ್ರೀಯ ಆಯೋಗದ ಚೇರ್ಮೆನ್ ಡಾ. ಯಗ್ನ ಉಮೇಶ್ ಶುಕ್ಲ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್ ನ ಪ್ರೋ ಚಾನ್ಸಿಲರ್ ಡಾ. ಎಚ್.ಎಸ್. ಬಳ್ಳಾಲ್, ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಫಿಸ್ಟ್ನ ಅಂತಾರಾಷ್ಟ್ರೀಯ ವ್ಯವಹಾರಗಳ ಚೇರ್ಮೆನ್ ಡಾ. ಅಲಿ ಇರಾನಿ, ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೋಥೆರಪಿಸ್ಟ್ನ ಅಧ್ಯಕ್ಷ ಡಾ. ಸಂಜೀವ್ ಕೆ. ಝಾ, ದಿ ಇಂಡಿಯನ್ ಅಸೋಸಿಯೇಶನ್ ಆಫ್ ಫಿಸಿಯೋಥೆರಪಿಸ್ಟ್ ರಾಷ್ಟ್ರೀಯ ಮಹಿಳಾ ವಿಭಾಗದ ಮುಖ್ಯಸ್ಥೆ ಡಾ.ರುಚಿ ವರ್ಸೇಯಿ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.
26ನೇ ವರ್ಷದ ಕಾರ್ಯಕ್ರಮ ಇದಾಗಿದ್ದು, ಫಿಲಿಪೀನ್ಸ್, ಮಸ್ಕತ್, ದುಬೈ ಸಹಿತ ದೇಶ ವಿದೇಶಗಳ ಸುಮಾರು ಆರು ಸಾವಿರಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಇದರ ಭಾಗವಾಗಿ ವಾರವಿಡೀ ವಿವಿಧ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ಎ. 6ರಂದು ಬೆಳಗ್ಗೆ 10 ಗಂಟೆಗೆ ನೀರುಮಾರ್ಗದ ಮಂಗಳಾ ಫಿಸಿಯೋಥೆರಪಿ ಕಾಲೇಜಿನಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿದೆ. ಕರಾವಳಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಂ.ಎ. ಗಫೂರ್ ಉದ್ಘಾಟಿಸಲಿದ್ದಾರೆ. 100ಕ್ಕೂ ಅಧಿಕ ರಕ್ತದಾನಿಗಳು ಭಾಗವಹಿಸುವ ನಿರೀಕ್ಷೆ ಇದೆ. ಎ. 7ರಂದು ಬೆಳಗ್ಗೆ 10ಕ್ಕೆ ವೆನ್ಸಾಕ್ ಆಸ್ಪತ್ರೆಯಲ್ಲಿ ಹಣ್ಣು ವಿತರಣಾ ಕಾರ್ಯಕ್ರಮ ಆಯೋಜಿಸಲಾಗಿದೆ. ಅದೇ ದಿನ ಬೆಳಗ್ಗೆ 9ಕ್ಕೆ ಮಂಗಳೂರಿನ ಯೇನೆಪೋಯ ವಿವಿಯಲ್ಲಿ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ಆಯೋಜಿಸಲಾಗಿದೆ. ಎ. 8ರಂದು ಬೆಳಗ್ಗೆ 9 ಗಂಟೆಗೆ ಪೂರ್ವ ಸಮ್ಮೇಳನ ಕಾರ್ಯಗಾರ ನಗರದ 5 ಕಡೆಗಳಲ್ಲಿ ಆಯೋಜಿಸಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಫಿಸಿಯೋಕಾನ್ ನ ಖಜಾಂಚಿ ಡಾ.ವಿಜಯ್ ಪಿ., ಸಂಚಾಲಕರಾದ ಡಾ. ಮುಹಮ್ಮದ್ ಸುಹೈಲ್, ಡಾ. ವೈಶಾಲಿ ಶ್ರೀಜಿತ್, ಜಂಟಿ ಕಾರ್ಯದರ್ಶಿ ಡಾ.ಭರತ್ ಉಪಸ್ಥಿತರಿದ್ದರು.