ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ವತಿಯಿಂದ ಬ್ಯಾರಿ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿ ಕುರಿತ ಸಂಶೋಧನಾ ಚಟುವಟಿಕೆಗಳ ಅಂಗವಾಗಿ ದಿವಂಗತ ಕಾಸಿಮ್ ಉಳ್ಳಾಲ್ ಅವರ ಪ್ರಸಿದ್ಧ ‘ತರವಾಡ್’ ಬ್ಯಾರಿ ಕಾದಂಬರಿಯ ತುಲನಾತ್ಮಕ ಹಿನ್ನೋಟ ಹಾಗೂ ಸಾಹಿತಿಗಳ-ಬರಹಗಾರರ ಕೂಡುವಿಕೆ ಕಾರ್ಯಕ್ರಮ ಮೇ 17ರಂದು ನಡೆಯಲಿದೆ.ನಗರದ ಡಾ. ಶಿವರಾಮ ಕಾರಂತ ಭವನದಲ್ಲಿ ಮಧ್ಯಾಹ್ನ 2.30ಕ್ಕೆ ಕಾರ್ಯಕ್ರಮ ಜರುಗಲಿದ್ದು, ಉದ್ಘಾಟನೆಯನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಡಾ. ಬಿ.ಎಂ. ಫಾರೂಕ್ ನೆರವೇರಿಸಲಿದ್ದಾರೆ.
ಖ್ಯಾತ ಕಥೆಗಾರ ಮುನವ್ವರ್ ಜೋಗಿಬೆಟ್ಟು ‘ತರವಾಡ್’ ಕಾದಂಬರಿಯ ಸುದೀರ್ಘ ಅವಲೋಕನ ನಡೆಸಿಕೊಡಲಿದ್ದು, ಹಿರಿಯ ಸಾಹಿತಿ ಹಾಗೂ ಪತ್ರಕರ್ತ ಬಿ.ಎಂ. ಹನೀಫ್ ಕಾದಂಬರಿಯ ಸಾಹಿತ್ಯ ಮೌಲ್ಯಗಳ ಕುರಿತು ಪ್ರತಿಕ್ರಿಯೆ ನೀಡಲಿದ್ದಾರೆ.ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮರ್ ಯು.ಎಚ್., ಬ್ಯಾರಿ ಅಧ್ಯಯನ ಪೀಠದ ಸಂಯೋಜಕ ಡಾ. ಅಬೂಬಕ್ಕರ್ ಸಿದ್ದೀಕ್ ಹಾಗೂ ದಿವಂಗತ ಯು.ಎ. ಖಾಸಿಮ್ ಅವರ ಪುತ್ರ ಝುಕರ್ ಖಾಸಿಮ್ ಭಾಗವಹಿಸಲಿದ್ದಾರೆ.
ಬ್ಯಾರಿ ಸಮುದಾಯದ ಹಿರಿಯ ಹಾಗೂ ಯುವ ಸಾಹಿತಿಗಳು, ಬರಹಗಾರರು ‘ತರವಾಡ್’ ಕಾದಂಬರಿಯ ಭಾಷೆ, ಸಂಸ್ಕೃತಿ ಮತ್ತು ಸಾಮಾಜಿಕ ಆಯಾಮಗಳ ಕುರಿತು ವಿಚಾರ ವಿನಿಮಯ ನಡೆಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಟ್ರಸ್ಟ್ ಅಧ್ಯಕ್ಷ ಬಿ.ಎ. ಮೊಹಮ್ಮದ್ ಹನೀಫ್ ವಹಿಸಲಿದ್ದು, ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬ್ಯಾರಿ ಸಂಶೋಧನಾ ಮತ್ತು ಅಭಿವೃದ್ಧಿ ಕೇಂದ್ರ ಪ್ರಕಟಣೆಯಲ್ಲಿ ಕೋರಿದೆ.