ಮಂಗಳೂರು : ನಗರದ ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಘ ಪರಿವಾರದ ಕಾರ್ಯಕರ್ತನಿಂದ ಅನ್ಯಾಯಕ್ಕೆ ಒಳಗಾಗಿ ಅಪ್ರಾಪ್ತ ಬಾಲಕಿಯ ಆತ್ಮಹತ್ಯೆ ನಡೆದಿದೆ. ಪ್ರೀತಿಯ ನಾಟಕವಾಡಿ ಬಾಲಕಿಯನ್ನು ನಿರಂತರವಾಗಿ ಅತ್ಯಾಚಾರ ಮಾಡಿ ಗರ್ಭಿಣಿಯಾಗಿಸಿ, ನಂತರ ವಂಚಿಸಿದ ಸಂಘಪರಿವಾರದ ಕಾರ್ಯಕರ್ತ ಅನೀಶ್ ಪೂಜಾರಿ ಎಂಬಾತನ ಕೃತ್ಯದಿಂದಾಗಿ ನೊಂದ ಬಾಲಕಿ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನಾಗರಿಕ ಸಮಾಜವೇ ತಲೆತಗ್ಗಿಸುವಂತಿರುವ ಈ ಪ್ರಕರಣದಲ್ಲಿ, ಮೃತ ಬಾಲಕಿ ತಾನು ಸಂಘಪರಿವಾರದಲ್ಲಿದ್ದರೂ ತನಗೆ ಯಾವುದೇ ಸಹಾಯ ಸಿಗಲಿಲ್ಲ ಎಂದು ತನ್ನ ಡೆತ್ ನೋಟ್ನಲ್ಲಿ ಅಳಲು ತೋಡಿಕೊಂಡಿದ್ದಾಳೆ.
ಈ ಕುರಿತು ವಿಮೆನ್ ಇಂಡಿಯಾ ಮೂವ್ಮೆಂಟ್ ಮಂಗಳೂರು ನಗರ ಜಿಲ್ಲಾಧ್ಯಕ್ಷೆ ಆಯಿಷಾ ಯಾಸ್ಮೀನ್ ಆಕ್ರೋಶ ವ್ಯಕ್ತಪಡಿಸಿದ್ದು, ಯಾವುದೇ ಪ್ರಕರಣಗಳಲ್ಲಿ ಆರೋಪಿಗಳು ಮುಸ್ಲಿಮರಾಗಿದ್ದರೆ ಕೂಡಲೇ ಬೀದಿಗಿಳಿದು ಇಡೀ ಸಮುದಾಯವನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವ ಬಿಜೆಪಿ ಮತ್ತು ಸಂಘಪರಿವಾರದವರು, ಈಗ ಆರೋಪಿ ತಮ್ಮದೇ ಸಂಘಟನೆಯ ಕಾರ್ಯಕರ್ತನಾಗಿರುವ ಕಾರಣಕ್ಕೆ ಮೌನಕ್ಕೆ ಶರಣಾಗಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ನಿಮ್ಮ ಹೋರಾಟ ಮತ್ತು ಪ್ರತಿಭಟನೆಗಳು ಕೇವಲ ಮುಸ್ಲಿಮರನ್ನು ಗುರಿಪಡಿಸಲು ಮಾತ್ರವೇ ಎಂದು ಅವರು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.
ಒಂದು ವೇಳೆ ಪ್ರಕರಣದ ಆರೋಪಿಯು ಮುಸ್ಲಿಮನಾಗಿದ್ದರೆ ಇಡೀ ಜಿಲ್ಲೆಯನ್ನು ಅಶಾಂತಿಯ ಬೆಂಕಿಯಲ್ಲಿ ಸುಡಲು ಕಾಯುತ್ತಿದ್ದ ಸಂಘಪರಿವಾರದವರು, ಈಗ ಆರೋಪಿ ತಮ್ಮದೇ ಸಂಘದ ಕಾರ್ಯಕರ್ತನೆಂಬ ಕಾರಣಕ್ಕೆ ಮೌನಕ್ಕೆ ಶರಣಾಗಿರುವುದು ಏಕೆ?
ಸಂಘ ಪರಿವಾರದ ಹೋರಾಟ ಮತ್ತು ಪ್ರತಿಭಟನೆಗಳು ಕೇವಲ ಮುಸ್ಲಿಮರನ್ನು ಗುರಿಪಡಿಸಲು ಮಾತ್ರವೇ? ಎಂದು ಅವರು ಪ್ರಶ್ನಿಸಿದ್ದಾರೆ.
ಮಹಿಳೆಯರು ಮತ್ತು ಬಾಲಕಿಯರ ರಕ್ಷಣೆಯ ವಿಷಯದಲ್ಲಿ ಧರ್ಮ ನೋಡಿ ಬೀದಿಗಿಳಿಯುವುದು ಅತ್ಯಂತ ಹೀನಾಯವಾದ ಕೆಲಸವಾಗಿದೆ. ಇಂತಹ ಘಟನೆಗಳು ನಡೆದಾಗ ಆರೋಪಿಯ ಧರ್ಮ ನೋಡಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳದೆ, ನೈಜ ನ್ಯಾಯಕ್ಕಾಗಿ ಹೋರಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮೃತ ಬಾಲಕಿಯ ಕುಟುಂಬಕ್ಕೆ ಅನ್ಯಾಯವಾದರೆ ವಿಮೆನ್ ಇಂಡಿಯಾ ಮೂವ್ಮೆಂಟ್ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಅವರು ತಿಳಿಸಿದ್ದಾರೆ.