ಮಂಗಳೂರು:ಉದ್ಯೋಗದಾತ, ಸಮಾಜಸೇವಕ ಹಾಗೂ ಧಾರ್ಮಿಕ ಸೇವಾಕರ್ತರಾಗಿ ಗುರುತಿಸಿಕೊಂಡಿರುವ ವರ್ಷಿಣಿ ಎಂಟರ್ಪ್ರೈಸಸ್ನ ಸಂಸ್ಥಾಪಕ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರನ್ನು 2026ನೇ ಸಾಲಿನ ಪ್ರತಿಷ್ಠಿತ ‘ಕನ್ನಡ ಪಯಸ್ವಿನಿ–ಉದ್ಯೋಗ ರತ್ನ’ ಅಚೀವ್ಮೆಂಟ್ ಅವಾರ್ಡ್ಗೆ ಆಯ್ಕೆ ಮಾಡಲಾಗಿದೆ.

ಬೆಳ್ಳಾರಿಯಲ್ಲಿ ವರ್ಷಿಣಿ ಎಂಟರ್ಪ್ರೈಸಸ್ ಮೂಲಕ ನೂರಾರು ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಅವರು, ಸಮಾಜಸೇವೆ, ಧಾರ್ಮಿಕ ಕಾರ್ಯಗಳು ಹಾಗೂ ದಾನಧರ್ಮಗಳ ಮೂಲಕವೂ ಸಮಾಜದಲ್ಲಿ ವಿಶಿಷ್ಟ ಗುರುತನ್ನು ಪಡೆದಿದ್ದಾರೆ. ವಿವಿಧ ಸಂಘ-ಸಂಸ್ಥೆಗಳಲ್ಲಿ ಪದಾಧಿಕಾರಿ, ನಿರ್ದೇಶಕ ಹಾಗೂ ಪೋಷಕರಾಗಿ ಸೇವೆ ಸಲ್ಲಿಸುತ್ತಿರುವ ಅವರು, ವಿಶ್ವ ರಾಮ ಕ್ಷತ್ರಿಯ ಮಹಾಸಂಘ (ರಿ.), ಕುಂದಾಪುರದ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಕಾಸರಗೋಡಿನ ಖ್ಯಾತ ಕನ್ನಡ ಸಂಸ್ಥೆಯಾದ ಕನ್ನಡ ಭವನ, ಡಾ. ಕೆ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ.

ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಹಾಗೂ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದ ಅಂಗವಾಗಿ ನಡೆಯುವ ಸಮಾರಂಭದಲ್ಲಿ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರಿಗೆ ‘ಕನ್ನಡ ಪಯಸ್ವಿನಿ–ಉದ್ಯೋಗ ರತ್ನ’ ಅಚೀವ್ಮೆಂಟ್ ಅವಾರ್ಡ್–2026 ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

