ಮಂಗಳೂರು: ಐತಿಹಾಸಿಕ ಪ್ರಸಿದ್ಧಿಯ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜುಲೈ 29ರಂದು ಗುರುಪೂರ್ಣಿಮೆಯ ಪುಣ್ಯ ದಿನದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗುರುಪೂರ್ಣಿಮೆಯ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜಾ ಕೈಂಕರ್ಯಗಳು ಹಾಗೂ ರುದ್ರಪಾರಾಯಣ ನಡೆಯಲಿದೆ. ಮಧ್ಯಾಹ್ನ 11.30 ಗಂಟೆಗೆ ಶ್ರೀ ಮತ್ಸೇಂದ್ರನಾಥ, ಶ್ರೀ ಗೋರಕ್ಷನಾಥ ಹಾಗೂ ಶ್ರೀ ಚೌರಂಗಿನಾಥ ಗುರುಗಳಿಗೆ ವಿಶೇಷ ಗುರುಪೂಜೆ ನೆರವೇರಲಿದ್ದು, ಇದೇ ಶುಭ ಸಂದರ್ಭದಲ್ಲಿ ಶ್ರೀ ಮಂಜುನಾಥ ದೇವರಿಗೆ ಏಕಾದಶ ರುದ್ರಾಭಿಷೇಕ ಸಂಪನ್ನಗೊಳ್ಳಲಿದೆ.

ಗುರುಪೂರ್ಣಿಮೆಯ ಈ ಪವಿತ್ರ ಪರ್ವದಂದು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶೇಷ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ, ಶ್ರೀ ಮಂಜುನಾಥ ದೇವರ ದಿವ್ಯ ದರ್ಶನ ಹಾಗೂ ಮಹಾಪ್ರಸಾದವನ್ನು ಸ್ವೀಕರಿಸಿ ಪುಣ್ಯಫಲ ಪಡೆಯುವಂತೆ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

