ಸಾವಯವ, ಗುಡಿ ಕೈಗಾರಿಕೆಯ ಉತ್ಪನ್ನಗಳ “ಸಪ್ತಾಚೆ ಸಾಂತ್” ಶಾಸಕ ಕಾಮತ್ ಉದ್ಘಾಟನೆ

ಮಂಗಳೂರು: ಮಂಗಳೂರಿನ ವಿ.ಟಿ. ರಸ್ತೆಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಗುಡಿ ಕೈಗಾರಿಕೆ, ಸಾವಯವ ಉತ್ಪನ್ನಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಆಡಳಿತ ಮಂಡಳಿಯ ಆಶ್ರಯದಲ್ಲಿ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಸಹಕಾರದಲ್ಲಿ ದೇವಳದ ಸನಿಹವಿರುವ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಸಪ್ತಾಚೆ ಸಾಂತ್ ಕಾರ್ಯಕ್ರಮಕ್ಕೆ ದೀಪ ಬೆಳಗಿಸಿ ಚಾಲನೆ ನೀಡಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಸಪ್ತಾಚೆ ಸಾಂತ್ ಮೂಲಕ ಅಖಂಡ ಭಜನಾ ಸಪ್ತಾಹದ ಗತ ವೈಭವ ಮತ್ತೆ ಮರುಕಳಿಸಿದೆ.

ಕಿರು ಮಧ್ಯಮ ವ್ಯಾಪಾರಿಗಳನ್ನು, ಉತ್ಪಾದಕರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಎಲ್ಲಾ ನಾಗರಿಕರಿಗೆ ಇಲ್ಲಿ ಮುಕ್ತ ಪ್ರವೇಶವಿದೆ. ಬೆಳಿಗ್ಗೆ 10 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಒಂದು ವಾರ ಇಲ್ಲಿ ಸಿಗುವ ಉತ್ಪನ್ನಗಳನ್ನು ಖರೀದಿಸುವ ಮೂಲಕ ಸಾರ್ವಜನಿಕರು ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಬೇಕಿದೆ ಎಂದು ತಿಳಿಸಿದರು. ಶ್ರೀ ವೆಂಕಟರಮಣ ದೇವಸ್ಥಾನದ ಮೋಕ್ತೇಸರ ಸತೀಶ್ ಪ್ರಭು ಅವರು ಮಾತನಾಡಿ “ಪ್ರಧಾನಿ ಮೋದಿಯವರು ಕಂಡ ಕನಸು, ಇಟ್ಟುಕೊಂಡಿರುವ ಗುರಿ ದೇಶದಲ್ಲಿಯೇ ಉತ್ಪನ್ನಗಳನ್ನು ತಯಾರಿಸಿ ಸ್ವಾವಲಂಬಿ ಭಾರತವನ್ನು ನಿರ್ಮಿಸುವುದು.

ಅದರಂತೆ ಇಲ್ಲಿ ಮನೆಗಳಲ್ಲಿಯೇ ತಯಾರಿಸಿದ ವಸ್ತುಗಳನ್ನು ಖರೀದಿಸುವ ಅವಕಾಶವನ್ನು ಈ ಸಂತೆ ನೀಡಿರುವುದು ಖುಷಿ ನೀಡಿದೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೆಂಕಟರಮಣ ದೇವಳದ ಆಡಳಿತ ಮೋಕ್ತೇಸರ ಅಡಿಗೆ ಬಾಲಕೃಷ್ಣ ಶೆಣೈ, ಎಸ್ ಸಿಡಿಸಿಸಿ ಬ್ಯಾಂಕ್ ಎಂಡಿ ಗೋಪಾಲಕೃಷ್ಣ ಭಟ್, ಮಹಾಮಾಯಾ ದೇವಳದ ಮೊಕ್ತೇಸರ ಪ್ರಕಾಶ್, ವಿಠೋಭ ದೇವಸ್ಥಾನದ ಮೋಕ್ತೇಸರ ಮರೋಳಿ ಸುರೇಂದ್ರ ಕಾಮತ್, ಪ್ರಮುಖರಾದ ಕೃಷ್ಣ ಆಚಾರ್ಯ, ಗಣ್ಯರು ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!