ಕಳೆದ ವರ್ಷದಿಂದ ಕೇರಳ ಸರಕಾರದ e-disrict OEC portal ನಲ್ಲಿ ಕುಲಾಲ ಹೆಸರು ಕೈ ಬಿಟ್ಟ ಕಾರಣ ಜಾತಿ ಪ್ರಮಾಣಪತ್ರ ನೀಡಲು ಸಂಬಂಧಪಟ್ಟ ಅಧಿಕಾರಿಗಳು ನಿರಾಕರಿಸುತ್ತಿದ್ದರು. ಇದರಿಂದ ಕುಲಾಲ ಸಮಾಜದ ಮಕ್ಕಳಿಗೆ ಸರಕಾರದಿಂದ ಯಾವುದೇ ಸವಲತ್ತುಗಳು ಸಿಗುತ್ತಿರಲಿಲ್ಲ. ಇದನ್ನು ಮನಗಂಡು ಕುಲಾಲ ವೇದಿಕೆ ಮಂಜೇಶ್ವರದ ನೇತೃತ್ವದಲ್ಲಿ ಸರಕಾರಕ್ಕೆ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಯ ಒಂದು ಪ್ರತಿಯನ್ನು ಸಿಪಿಐಎಂ ನೇತಾರ ಕೆ ಆರ್ ಜಯಾನಂದರವರಿಗೂ ನೀಡಿದ್ದರು. ಈ ಮನವಿಯನ್ನು ಪುರಸ್ಕರಿಸಿ ಜಯಾನಂದರವರು ಸರಕಾರವನ್ನು ಒತ್ತಾಯಿಸಿ ಮರುಸ್ಥಾಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಕೇರಳ ಸರಕಾರ ತುಳು ಮಾತೃ ಭಾಷೆಯ ಕುಲಾಲ ಸಮುದಾಯವನ್ನು ಓ ಇ ಸಿ ಪಟ್ಟಿಯಲ್ಲಿ ಸೇರಿಸಿ ಮಹತ್ವದ ಆದೇಶ ನೀಡಿದೆ . ಇದರಿಂದ ಕೇರಳದಲ್ಲಿ ವಿಧ್ಯಾಭ್ಯಾಸ ಪಡೆಯುವ ಕುಲಾಲ ಮಕ್ಕಳಿಗೆ ಶೈಕ್ಷಣಿಕ ಮೀಸಲಾತಿ ಮತ್ತು ವಿಧ್ಯಾರ್ಥಿ ವೇತನ ಲಭಿಸಲಿದೆ. ಆದೇಶ ನೀಡಿದ ಕೇರಳ ಸರ್ಕಾರವನ್ನು ಮತ್ತು ಇದಕ್ಕಾಗಿ ಶ್ರಮಿಸಿದ ಕೆ ಆರ್ ಜಯಾನಂದರನ್ನು ಸಿಪಿಐಎಂ ಅಭಿನಂದಿಸಿದೆ.