ಕಾಸರಗೋಡು: ಅನಧಿಕೃತವಾಗಿ ನದಿಯ ಮರಳು ಸಾಗಾಟದ ಮಾಹಿತಿ ಪೊಲೀಸರಿಗೆ ನೀಡಿದ ದ್ವೇಷದಿಂದ ಮೊಗ್ರಾಲ್ನಲ್ಲಿ ಯುವಕನ ಮನೆಗೆ ನುಗ್ಗಿ ಕೊಲೆ ಯತ್ನ ನಡೆಸಿದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.
ಕೆ.ಕೆ.ಪುರಂ ನಿವಾಸಿಗಳಾದ ಸನದ್ (31), ಗಫೂರ್ (34) ಮತ್ತು ತನ್ಸೀಫ್ (27) ಬಂಧಿತರಾಗಿದ್ದು, ಕುಂಬಳೆ ಪೊಲೀಸ್ ಇನ್ಸ್ಪೆಕ್ಟರ್ ಬೈಜು ಕೆ. ಥಾಮಸ್ ಅವರ ಸೂಚನೆಯ ಮೇರೆಗೆ ಎಸ್ಐ ಅನಂತಕೃಷ್ಣನ್ ಆರ್ ಮೆನನ್ ಹಾಗೂ ಅವರ ತಂಡ ಬಂಧಿಸಿದೆ.
ಆರೋಪಿಗಳು ಸುಲ್ತಾನ್ ಬತ್ತೇರಿಯಲ್ಲಿ ಅಡಗಿ ಇದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಕೆಲವು ವಾರಗಳ ಹಿಂದೆ ಮೊಗ್ರಾಲ್ ಲೀಗ್ ಕಚೇರಿ ಸಮೀಪದ ಬೈತುಲ್ ಸುರೂರ್ ನಿವಾಸಿ ಅಬ್ದುಲ್ಲ ಹರ್ಷಾದ್ (35) ಮೇಲೆ ಈ ಕೊಲೆ ಯತ್ನ ನಡೆದಿದೆ. ಮನೆಗೆ ನುಗ್ಗಿದ ತಂಡ ಅಬ್ದುಲ್ಲ ಹರ್ಷಾದ್ ಅವರ ಎದೆಗೆ ಹೊಡೆದು, ಕತ್ತು ಹಿಸುಕಿಸಲು ಯತ್ನಿಸಿದರೆಂದು ಪ್ರಕರಣದಲ್ಲಿ ಆರೋಪಿಸಲಾಗಿದೆ.