ಮಂಜೇಶ್ವರ: ಜಾತಿ-ಧರ್ಮಗಳ ಹೆಸರಿನಲ್ಲಿ ದ್ವೇಷದ ಕಿಡಿ ಹರಡುತ್ತಿರುವ ಇಂದಿನ ಕಾಲಘಟ್ಟದಲ್ಲಿ, ತೂಮಿನಾಡಿನ ಮುಸ್ಲಿಂ ಯುವಕರು ಮಾನವೀಯತೆ ಮತ್ತು ಸೌಹಾರ್ದತೆಯ ಹೊಸ ಮನ್ವಂತರಕ್ಕೆ ಸಾಕ್ಷಿಯಾಗಿದ್ದಾರೆ.
ತೂಮಿನಾಡು ಬ್ರಹ್ಮಶ್ರೀ ಮುಗೇರ ಮಹಾಕಾಳಿ ದೈವಸ್ಥಾನದ ಬ್ರಹ್ಮಕಲಶೋತ್ಸವದ ಅಂಗವಾಗಿ ನಡೆದ ಹೊರೆಕಾಣಿಕೆ ಮೆರವಣಿಗೆಯಲ್ಲಿ ಭಾಗವಹಿಸಿದ ಭಕ್ತಾದಿಗಳಿಗೆ ಮೊಸರು ವಿತರಿಸುವ ಮೂಲಕ ಈ ಯುವಕರು ಕೋಮು ಸೌಹಾರ್ದತೆಯನ್ನು ಮೆರೆದಿದ್ದಾರೆ.
ಗುರುವಾರದಿಂದ ಆರಂಭವಾಗಲಿರುವ ಬ್ರಹ್ಮಕಲಶ ಹಾಗೂ ವರ್ಷಾವಧಿ ನೇಮೋತ್ಸವದ ಹಿನ್ನೆಲೆಯಲ್ಲಿ ಅದ್ಧೂರಿ ಹೊರೆಕಾಣಿಕೆ ಮೆರವಣಿಗೆ ಆಯೋಜಿಸಲಾಗಿತ್ತು. ಸುಡುವ ಬಿಸಿಲನ್ನೂ ಲೆಕ್ಕಿಸದೆ ಮೆರವಣಿಗೆಯಲ್ಲಿ ಸಾಗುತ್ತಿದ್ದ ನೂರಾರು ಭಕ್ತರಿಗೆ, ಸ್ಥಳೀಯ ಮುಸ್ಲಿಂ ಯುವಕರು ತಂಪು ಮೊಸರು ನೀಡಿ ಉಪಚರಿಸಿದರು.
“ದೈವದ ಕಾರ್ಯದಲ್ಲಿ ನಾವೆಲ್ಲರೂ ಒಂದೇ” ಎನ್ನುವ ಸಂದೇಶ ಸಾರಿದ ಈ ಯುವಕರ ನಡೆಯನ್ನು ಕಂಡ ಸಾರ್ವಜನಿಕರು ಭಾವುಕರಾದರು. ದೈವಸ್ಥಾನದ ಸಮಿತಿ ಹಾಗೂ ಮೆರವಣಿಗೆಯಲ್ಲಿದ್ದ ಭಕ್ತಾದಿಗಳು ಯುವಕರ ಈ ನಿಸ್ವಾರ್ಥ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ತೂಮಿನಾಡಿನ ಈ ಸೌಹಾರ್ದತೆಯ ಚಿತ್ರಣ ಇಡೀ ಜಿಲ್ಲೆಗೆ ಮಾದರಿಯಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.