ಮಂಜೇಶ್ವರ: ಇಲ್ಲಿನ ಕುಂಡುಕೊಳಕೆ ಸಮುದ್ರ ಕಿನಾರೆಯಲ್ಲಿ ಬುಧವಾರ ಸಂಜೆ ಭೀಕರ ದುರಂತವೊಂದು ಸಂಭವಿಸಿದ್ದು, 18 ವರ್ಷದ ಯುವಕನೊಬ್ಬ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದಾನೆ.
ಮಂಜೇಶ್ವರ ಚೌಕಿ ನಿವಾಸಿಗಳಾದ ಉಮರುಲ್ ಫಾರೂಕ್ ಮತ್ತು ರಝೀನಾ ದಂಪತಿಗಳ ಪುತ್ರ ಮೊಹಮ್ಮದ್ ಝೈನುಲ್ ಹಾಬಿದ್ ಸಮುದ್ರದಲ್ಲಿ ನಾಪತ್ತೆಯಾದ ದುರ್ದೈವಿ.
ಸ್ವಲ್ಪ ಅನಾರೋಗ್ಯದಿಂದ ಬಳಲುತ್ತಿದ್ದ ಝೈನುಲ್ ಹಾಬಿದ್, ಬುಧವಾರ ಸಂಜೆ ತನ್ನ ಕುಟುಂಬದವರೊಂದಿಗೆ ಮನಃಶಾಂತಿಗಾಗಿ ಮತ್ತು ವಿಹಾರಕ್ಕಾಗಿ ಸಮುದ್ರ ಕಿನಾರೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಅಲೆಗಳ ಸುಳಿಗೆ ಸಿಲುಕಿದ ಯುವಕ ನೀರಿನಲ್ಲಿ ಕೊಚ್ಚಿ ಹೋಗಿದ್ದಾನೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಮಂಜೇಶ್ವರ ಪೊಲೀಸರು, ಸ್ಥಳೀಯ ಈಜು ತಜ್ಞರು ಮತ್ತು ಊರವರು ಯುವಕನಿಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಕತ್ತಲೆ ಮತ್ತು ಸಮುದ್ರದ ಅಲೆಗಳ ತೀವ್ರತೆ ಶೋಧ ಕಾರ್ಯಕ್ಕೆ ಅಡ್ಡಿಯಾಗಿದ್ದರೂ, ಮೃತದೇಹ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿದಿದೆ.