Kasaragod: ಕನ್ನಡ ಭವನದ ಅಂಗ ಸಂಸ್ಥೆಯಾದ ಕನ್ನಡ ಭವನ ಪ್ರಕಾಶನದ ಮೂರನೇ ವಾರ್ಷಿಕೋತ್ಸವವು ಇಂದು (ಏಪ್ರಿಲ್ 22) ಸಂಜೆ 5 ಗಂಟೆಗೆ ಕನ್ನಡ ಭವನ ವೇದಿಕೆಯಲ್ಲಿ ನಡೆಯಲಿದೆ.
ಕಾರ್ಯಕ್ರಮಕ್ಕೆ ಪತ್ರಕರ್ತ ಹಾಗೂ ಕನ್ನಡ ಭವನ ಗೌರವ ಅಧ್ಯಕ್ಷ ಪ್ರದೀಪ್ ಬೇಕಲ್ ಅಧ್ಯಕ್ಷತೆ ವಹಿಸಲಿದ್ದು, ಕನ್ನಡ ಭವನ ನಿರ್ದೇಶಕ ಹಾಗೂ ಧಾರ್ಮಿಕ ಮುಂದಾಳು ಡಾ. ಕೆ. ಎನ್. ವೆಂಕಟ್ರಮಣ ಹೊಳ್ಳ ಉದ್ಘಾಟಿಸಲಿದ್ದಾರೆ.
ಈ ಸಂದರ್ಭದಲ್ಲಿ ಅಖಿಲ ಭಾರತ ಮಟ್ಟದಲ್ಲಿ ಸಾಧನೆಗೈದ ಇಬ್ಬರು ಪ್ರತಿಭಾವಂತರಿಗೆ ಗೌರವ ಸಮರ್ಪಣೆ ನಡೆಯಲಿದೆ. ಎಂ.ಬಿ.ಬಿ.ಎಸ್., ಡಿ.ಎನ್.ಬಿ. (ಜೆನರಲ್ ಸರ್ಜರಿ) ನಂತರ ಎಂ.ಸಿ.ಎಚ್. ನ್ಯೂರೋ ಸರ್ಜರಿ ವಿಭಾಗಕ್ಕೆ ಆಯ್ಕೆಯಾದ ಡಾ. ಸಚಿನ್ ಬೇಕಲ್ ಹಾಗೂ ಬ್ಯಾಂಕಿಂಗ್ ಕ್ಷೇತ್ರದ ಜೆ.ಎ.ಐ.ಐ.ಬಿ. ಮತ್ತು ಸಿ.ಎ.ಐ.ಐ.ಬಿ. ಪರೀಕ್ಷೆಗಳಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆಗೈದ ಶ್ರೀಮತಿ ದಯಾವತಿ ಅವರಿಗೆ “ಭರವಸೆಯ ಭಾರತ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತದೆ.
ಇದೇ ವೇಳೆ ಕನ್ನಡ ಭವನ ಪ್ರಕಾಶನದ 14ನೇ ಕೃತಿಯಾದ ಲಕ್ಷ್ಮಿ ಎಸ್ ಅವರ ಕವನ ಸಂಕಲನ *“ಅಂತರ್ದ್ವನಿ”*ಯನ್ನು ಲೇಖಕಿ ಹಾಗೂ ಕನ್ನಡ ಭವನ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷೆ ರೇಖಾ ಸುದೇಶ್ ರಾವ್ ಬಿಡುಗಡೆಗೊಳಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕವಿತಾ ಗಾಯನ ಮತ್ತು ಗೀತಾ ಗಾಯನ ಕೂಡ ನಡೆಯಲಿದ್ದು, ಸಾಹಿತ್ಯಾಸಕ್ತರಿಗೆ ವಿಶೇಷ ಆಕರ್ಷಣೆಯಾಗಲಿದೆ.
ಈ ಕುರಿತು ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ವಾಮನ್ ರಾವ್ ಬೇಕಲ್ ಹಾಗೂ ಕಾರ್ಯದರ್ಶಿ ವಸಂತ್ ಕೆರೆಮನೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.