ಉಪ್ಪಳದ ಕೊಂಡೆವೂರು ಆಶ್ರಮದಲ್ಲಿ 132 ಅಪರೂಪದ ಕಾಸರಗೋಡು ಕುಳ್ಳನ್ ಹಸುಗಳ ಸಂರಕ್ಷಣೆ

ಉಪ್ಪಳ: ಕಾಸರಗೋಡು ಜಿಲ್ಲೆಯ ಕೊಂಡೆವೂರು ನಿತ್ಯಾನಂದಮಠ ಆಶ್ರಮ ಕೇವಲ ಆಧ್ಯಾತ್ಮಿಕ ಕೇಂದ್ರವಷ್ಟೇ ಅಲ್ಲ, ಅಪರೂಪದ ನಾಡುಜಾತಿ ಪಶು ಸಂರಕ್ಷಣೆ ಹಾಗೂ ಪ್ರಕೃತಿ ಸ್ನೇಹಿ ಜೀವನಶೈಲಿಗೆ ಮಾದರಿಯಾಗಿಯೂ ಗಮನ ಸೆಳೆಯುತ್ತಿದೆ. ವಂಶನಾಶದ ಅಂಚಿನಲ್ಲಿದ್ದ ಅಪರೂಪದ ಕಾಸರಗೋಡು ಕುಳ್ಳನ್ ಹಸು ಜಾತಿಯ 132 ಹಸುಗಳನ್ನು ಆಶ್ರಮದಲ್ಲಿ ಸಂರಕ್ಷಿಸಿ ಪೋಷಿಸಲಾಗುತ್ತಿದೆ.


ಒಮ್ಮೆ ಕಾಸರಗೋಡು ಗ್ರಾಮೀಣ ಪ್ರದೇಶಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತಿದ್ದ ಈ ನಾಡುಜಾತಿ ಹಸುಗಳು, ಜೀವನಶೈಲಿಯ ಬದಲಾವಣೆ, ಅರಣ್ಯ ನಾಶ ಹಾಗೂ ಸಂಕರ ಜಾತಿಯ ಹಸುಗಳ ಪ್ರಭಾವದಿಂದ ನಿಧಾನವಾಗಿ ನಾಶದ ಅಂಚಿಗೆ ತಲುಪಿದ್ದವು. ಹೆಚ್ಚಿನ ಹಾಲು ನೀಡುವ ಸಂಕರ ಜಾತಿ ಹಸುಗಳತ್ತ ರೈತರು ತಿರುಗಿದ ಪರಿಣಾಮ ಕಡಿಮೆ ಹಾಲು ನೀಡುವ ಕಾಸರಗೋಡು ಕುಳ್ಳನ್ ಹಸುಗಳ ಸಾಕಣೆ ಕುಂಠಿತಗೊಂಡಿತ್ತು.
ಈ ಹಿನ್ನೆಲೆ ರಾಜ್ಯ ಪಶುಸಂಗೋಪನಾ ಇಲಾಖೆ ಸಂರಕ್ಷಣಾ ಯೋಜನೆ ಆರಂಭಿಸುವುದಕ್ಕೂ ಮುನ್ನವೇ ಕೊಂಡೇವೂರು ಆಶ್ರಮ ಈ ಅಪರೂಪದ ಜಾತಿಯ ಸಂರಕ್ಷಣೆಯ ಹೊಣೆ ಹೊತ್ತಿತ್ತು. ಇದೇ ವೇಳೆ, ಬೇಳ ಕುಮಾರಮಂಗಲಂ ಸಮೀಪ ಪಶುಸಂಗೋಪನಾ ಇಲಾಖೆಯ ಕೇಂದ್ರದಲ್ಲಿಯೂ ಈ ಜಾತಿಯ ಹಸುಗಳನ್ನು ಸಾಕಲಾಗುತ್ತಿದ್ದು, ಅಲ್ಲಿ ಪ್ರಸ್ತುತ 173 ಹಸುಗಳಿವೆ.


ಹರಿಯಾಣದ ಕರ್ಣಾಲಿನ ರಾಷ್ಟ್ರೀಯ ಪ್ರಾಣಿ ಜನ್ಯ ಸಂಪನ್ಮೂಲ ಸಂಸ್ಥೆ ದೇಶದ 34 ನಾಡುಜಾತಿ ಹಸುಗಳನ್ನು ಅಧಿಕೃತವಾಗಿ ಗುರುತಿಸಿದ್ದು, ಕೇರಳದಿಂದ ವೆಚ್ಚೂರು ಹಸು ಮತ್ತು ಕಾಸರಗೋಡು ಕುಳ್ಳನ್ ಜಾತಿ ಈ ಪಟ್ಟಿಗೆ ಸೇರಿವೆ.
ಸಣ್ಣ ದೇಹಾಕೃತಿ, ಕಡಿಮೆ ಆಹಾರದಲ್ಲೇ ಬದುಕುವ ಸಾಮರ್ಥ್ಯ ಮತ್ತು ಸುಲಭ ಸಾಕಣೆ ಈ ಜಾತಿಯ ವಿಶೇಷತೆಗಳಾಗಿವೆ. ಹಾಲಿನ ಉತ್ಪಾದನೆ ಕಡಿಮೆ ಇದ್ದರೂ ಔಷಧೀಯ ಗುಣಗಳಿಂದ ಕೂಡಿದ ಹಾಲು ಎಂಬ ಖ್ಯಾತಿ ಈ ಜಾತಿಗಿದೆ. ವಿಶೇಷವಾಗಿ “ಕಪಿಲ” ವಿಭಾಗದ ಹಸುಗಳ ಹಾಲಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಲ್ಯಾಕ್ಟೋಫೆರಿನ್ ಪ್ರೋಟೀನ್ ಅಂಶ ಹೆಚ್ಚು ಇದೆ ಎಂದು ತಿಳಿದುಬಂದಿದೆ.
ಹಾಲಿನ ಜೊತೆಗೆ ಗೋಮಯ ಮತ್ತು ಗೋಮೂತ್ರಕ್ಕೂ ಉತ್ತಮ ಬೇಡಿಕೆ ಇದೆ. ಆಶ್ರಮದಲ್ಲಿ ವಾಣಿಜ್ಯ ಮಾರಾಟ ನಡೆಯದಿದ್ದರೂ, ಹಾಲಿನಿಂದ ತುಪ್ಪ ಮತ್ತು ವಿವಿಧ ಔಷಧೀಯ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ.


20 ಎಕರೆ ವಿಸ್ತೀರ್ಣದಲ್ಲಿರುವ ಆಶ್ರಮದಲ್ಲಿ ನೂರಕ್ಕೂ ಹೆಚ್ಚು ಔಷಧೀಯ ಸಸ್ಯಗಳ ತೋಟ, ಜೈವಿಕ ಕೃಷಿ ಹಾಗೂ ಪಶುಗಳಿಗೆ ಹಸಿರು ಮೇವು ಬೆಳೆಸುವ ವ್ಯವಸ್ಥೆಯೂ ಇದೆ. ಬೆಂಡೆಕಾಯಿ, ಬೇಳೆ, ಬಸಳೆ ಸೇರಿದಂತೆ ವಿವಿಧ ತರಕಾರಿಗಳನ್ನು ಸಂಪೂರ್ಣ ಜೈವಿಕ ವಿಧಾನದಲ್ಲಿ ಬೆಳೆಸಲಾಗುತ್ತಿದೆ.
ಆಶ್ರಮಕ್ಕೆ ವಿವಿಧ ಕ್ಷೇತ್ರಗಳ ಗಣ್ಯರು ಭೇಟಿ ನೀಡುತ್ತಿದ್ದು, ಪ್ರಕೃತಿ ಸ್ನೇಹಿ ಜೀವನಶೈಲಿ ಮತ್ತು ಪರಿಸರ ಸಂರಕ್ಷಣೆಯ ಸಂದೇಶವನ್ನು ಆಶ್ರಮ ಹರಡುತ್ತಿದೆ. “ಪ್ರಕೃತಿ ಸಂರಕ್ಷಣೆ ಸಮಾಜಕ್ಕೆ ಸಮೃದ್ಧಿ ಮತ್ತು ಶಾಂತಿ ತರುತ್ತದೆ” ಎಂಬ ಸಂದೇಶದೊಂದಿಗೆ 2025ರಲ್ಲಿ ಪರಿಸರ ಮಹಾಯಾಗವೂ ಆಯೋಜಿಸಲಾಗಿತ್ತು.
ವಂಶನಾಶದ ಅಂಚಿನಲ್ಲಿದ್ದ ನಾಡುಜಾತಿ ಹಸುಗಳನ್ನೂ ಪ್ರಕೃತಿಯನ್ನೂ ಒಂದೇ ಸಮಯದಲ್ಲಿ ಕಾಪಾಡಿ ನಾಡಿಗೆ ಮಾದರಿಯಾಗಿರುವ ಕೇಂದ್ರವಾಗಿ ಕೊಂಡೇವೂರು ಆಶ್ರಮ ಗುರುತಿಸಿಕೊಂಡಿದೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!