ಮಂಜೇಶ್ವರ: ಮಟ್ಟನ್ನೂರು ಪಾಲಿಟೆಕ್ನಿಕ್ ಕಾಲೇಜಿನಲ್ಲಿ ನಡೆದ ಕೇರಳ ಸರ್ಕಾರಿ ಪ್ರಮಾಣಪತ್ರ ಪರೀಕ್ಷೆಯಲ್ಲಿ, ಮೊಬೈಲ್ ಫೋನ್ ಬಳಸಿ ನಕಲು ಮಾಡುತ್ತಿದ್ದ ಆರೋಪದಡಿ ಕೆಎಸ್ಇಬಿ ತಾತ್ಕಾಲಿಕ ನೌಕರ ಎಸ್. ಜನಾರ್ಧನ (34) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.ಕುರುಡಪದವು ಸಾದಂಗಯ ನಿವಾಸಿಯಾದ ಈತ, ಖಾಯಂ ಉದ್ಯೋಗ ಪಡೆಯುವ ಉದ್ದೇಶದಿಂದ ಪರೀಕ್ಷೆಗೆ ಹಾಜರಾಗಿದ್ದನೆನ್ನಲಾಗಿದೆ.

ಪರೀಕ್ಷಾ ಕೇಂದ್ರದ ಮೇಲ್ವಿಚಾರಕರ ದೂರಿನ ಮೇರೆಗೆ ಕೂತುಪರಂಬ ಎಸಿಪಿ ಸಿಬಿ ಟೋಮ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ. ತಾತ್ಕಾಲಿಕ ನೌಕರರ ವಾಟ್ಸಪ್ ಗ್ರೂಪ್ನ ಅಡ್ಮಿನ್ ಆಗಿರುವ ವಡಗರ ನಿವಾಸಿ ಸುರೇಶ್ ಬಾಬು ಎಂಬಾತ ಮೊಬೈಲ್ ಮೂಲಕ ಉತ್ತರಗಳನ್ನು ಕಳುಹಿಸಿಕೊಟ್ಟಿದ್ದನು.

ಜನಾರ್ಧನ ಸಿಕ್ಕಿಬಿದ್ದ ಬೆನ್ನಲ್ಲೇ ಸುರೇಶ್ ಬಾಬು ತಲೆಮರೆಸಿಕೊಂಡಿದ್ದು, ಪೊಲೀಸರು ಆತನ ಹುಡುಕಾಟ ನಡೆಸುತ್ತಿದ್ದಾರೆ. ಅಂದು ಒಟ್ಟು 22 ಮಂದಿ ಪರೀಕ್ಷೆ ಬರೆದಿದ್ದರು.

