ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿಯ ಬಂದಿಯೋಡ್ನಲ್ಲಿ ಸೇವಾಭಾರತಿಯ ಆಂಬುಲೆನ್ಸ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಹೊಡೆದು ಮಗುಚಿಬಿದ್ದ ಪರಿಣಾಮ, ಆಂಬುಲೆನ್ಸ್ನಲ್ಲಿದ್ದ ರೋಗಿ ಸಾವನ್ನಪ್ಪಿದ್ದು, ನಾಲ್ಕು ಮಂದಿ ಗಾಯಗೊಂಡಿದ್ದಾರೆ.ಉಪ್ಪಳ ಕೆಎಸ್ಇಬಿ ಗುತ್ತಿಗೆದಾರ ಬಂದಿಯೋಡ್ ಅಡ್ಕದ ಅಶೋಕ (41) ಸಾವನ್ನಪ್ಪಿದ ದುರ್ದೈವಿ.

ಅನಾರೋಗ್ಯದಿಂದ ಉಪ್ಪಳ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಾಸರಗೋಡು ಆಸ್ಪತ್ರೆಗೆ ಸಾಗಿಸುವಾಗ ಈ ದುರ್ಘಟನೆ ನಡೆದಿದೆ.ಅಪಘಾತದಲ್ಲಿ ಅಶೋಕ ಅವರ ಪತ್ನಿ ಪ್ರತಿಭಾ, ಸಹೋದರ ರಾಜೇಶ್, ರಾಜೇಶ್ ಪತ್ನಿ ಹಾಗೂ ಆಂಬುಲೆನ್ಸ್ ಚಾಲಕ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಅಶೋಕ ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಸಾವು ಸಂಭವಿಸಿದೆ.


