ಮಂಗಳೂರು: ಉಪ್ಪಳ ರೈಲ್ವೆ ಗೇಟ್ ಬಳಿ ನಿಗೂಢವಾಗಿ ಹತ್ಯೆಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ರೌಡಿಶೀಟರ್ ಬಜಾಲ್ ನಿವಾಸಿ ಟೊಪ್ಪಿ ನೌಫಲ್ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ಆತನ ಶವವನ್ನು ಪೊಲೀಸರು ಕಾಸರಗೋಡು ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಮರಣೋತ್ತರ (ಪೋಸ್ಟ್ ಮಾರ್ಟಂ) ಪರೀಕ್ಷೆ ನಡೆಸಿ ಶವವನ್ನು ಮೃತನ ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.
ಮೂಲಗಳ ಪ್ರಕಾರ ಟೊಪ್ಪಿಯ ತಲೆ ಹಾಗೂ ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯಗಳು ಕಂಡು ಬಂದಿರುವುದರಿಂದ ಇದೊಂದು ವ್ಯವಸ್ಥಿತ ಕೊಲೆಯಾಗಿರುವ ಬಗ್ಗೆ, ಪೊಲೀಸರು ಅನುಮಾನಿಸಿದ್ದಾರೆ. ಶವದ ಪ್ಯಾಂಟ್ ಜೇಬಿನಿಂದ ಸಿರಿಂಜ್ ಮತ್ತು ವಾಹನದ ಕೀಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸಿರಿಂಜ್ ಅನ್ನು ಮಾದಕ ದ್ರವ್ಯ ಸೇವನೆಗೆ ಬಳಸಲಾಗಿದೆಯೇ ಅಥವಾ ಬಲವಂತವಾಗಿ ನೀಡಲಾಗಿದೆಯೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ. ಶ್ವಾನ ದಳದ ಸಹಾಯದಿಂದ ಸಂಶಯಿತರು ಹಾದುಹೋಗಿದ ಮಾರ್ಗವನ್ನು ಪತ್ತೆಹಚ್ಚಲು ಕಾರ್ಯಾಚರಣೆ ನಡೆಯುತ್ತಿದೆ. ವಶಪಡಿಸಿದ ತಾಂತ್ರಿಕ ಸಾಕ್ಷ್ಯಗಳ ಸಹಾಯದಿಂದ ಪೊಲೀಸರು ನೌಫಾಲ್ನ ನಿಗೂಢ ಹತ್ಯೆಯ ಬೆನ್ನು ಬಿದ್ದಿದ್ದಾರೆ.
ಮುಖ್ಯವಾಗಿ ನೌಫಾಲ್ ಎದುರಾಳಿ ಟೀಮಿನ ಟಾರ್ಗೆಟ್ ಆಗಿದ್ದ ಎನ್ನುವುದು ಪೊಲೀಸರ ಅನುಮಾನವಾಗಿರುವುದರಿಂದ ಸೋಷಿಯಲ್ ಮೀಡಿಯಾಗಳ ಮೇಲೂ ಕಣ್ಣಿಟ್ಟಿದ್ದಾರೆ. ಆರಂಭದಲ್ಲಿ ಈತ ರೈಲು ಢಿಕ್ಕಿ ಹೊಡೆದು ಸಾವನ್ನಪ್ಪಿರಬಹುದೆಂದು ಶಂಕಿಸಲಾಗಿತ್ತು. ಆದರೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ರೈಲು ಢಿಕ್ಕಿ ಹೊಡೆದ ಸ್ಪಷ್ಟ ಲಕ್ಷಣಗಳಿಲ್ಲ. ಪ್ರಾಥಮಿಕವಾಗಿ, ಸಾವು ಬೇರೆಡೆ ಸಂಭವಿಸಿದ್ದು ಶವವನ್ನು ಹಳಿಯ ಬಳಿ ಎಸೆದಿರಬಹುದೆಂದು ಶಂಕಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಂಜೇಶ್ವರ ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ತನಿಖೆಯ ನೇತೃತ್ವ ವಹಿಸಿದ್ದಾರೆ. ಮೊಬೈಲ್ ಫೋನ್ ಮತ್ತು ಟವರ್ ಲೊಕೇಶನ್ ಆಧಾರದಲ್ಲಿ ತನಿಖೆ ನಡೆಯುತ್ತಿದೆ ವಾಹನ ಚಲನವಲನಗಳನ್ನು ಪತ್ತೆಹಚ್ಚಲಾಗುತ್ತಿದೆ, ಹತ್ತಿರದ ಪ್ರದೇಶಗಳಿಂದ ಸಿಸಿಟಿವಿ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುತ್ತಿದೆ ಮತ್ತು ಇತ್ತೀಚಿನ ಸಂಪರ್ಕಗಳು ಮತ್ತು ಗ್ಯಾಂಗ್ ಸಂಪರ್ಕಗಳ ಕುರಿತು ತನಿಖೆ ನಡೆಯುತ್ತಿದದೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳದ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಓರ್ವನನ್ನು ಮಂಜೇಶ್ವರ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೃತ ದೇಹವನ್ನು ಗುರುತಿಸಲು ಸ್ಥಳಕ್ಕೆ ಬಂದ ಮತ್ತೊಬ್ಬ ವ್ಯಕ್ತಿಯನ್ನು ಕೂಡ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ಸ್ಪೆಕ್ಟರ್ ಪಿ. ಅಜಿತ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಶೀಘ್ರದಲ್ಲೇ ಇನ್ನಷ್ಟು ಆರೋಪಿಗಳನ್ನು ಗುರುತಿಸಲು ಕ್ರಮ ಕೈಗೊಂಡಿದ್ದಾರೆ.
ಪೊಲೀಸ್ ದಾಖಲೆಗಳ ಪ್ರಕಾರ ನೌಫಲ್ ಕಳೆದ ಎಂಟು ವರ್ಷಗಳಿಂದ ಹಲವಾರು ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾನೆ. ನವೆಂಬರ್ 2017 ರಲ್ಲಿ, ಜಿಯಾ ಮತ್ತು ಫಯಾಜ್ ಅವರ ಫರಂಗಿಪೇಟೆ ಜೋಡಿ ಕೊಲೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಅವರನ್ನು ಬಂಧಿಸಿದರು. ಇಬ್ಬರೂ ಎದುರಾಳಿ ಗ್ಯಾಂಗ್ ಗೆ ಸೇರಿದವರಾಗಿದ್ದು, ಅಕ್ಟೋಬರ್ 26, 2017 ರಂದು ಫರಂಗಿಪೇಟೆಯಲ್ಲಿ ನಡೆದ ಗ್ಯಾಂಗ್ ವಾರ್ನಲ್ಲಿ ಕೊಲ್ಲಲ್ಪಟ್ಟರು.