ಕೇರಳದಲ್ಲಿ ಈ ಬಾರಿ ಮುಂಗಾರುಮಳೆ 15 ವರ್ಷಗಳ ನಂತರ ಸಕಾಲಕ್ಕೆ ಆರಂಭವಾಗಿ ತೀವ್ರವಾದ ಗಾಳಿ ಮಳೆಯ ಸಾಧ್ಯತೆಯ ಬಗ್ಗೆ ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.ಒಂದೆಡೆ ತೀವ್ರವಾದ ಗಾಳಿ ಮಳೆ ರಾಜ್ಯಾದ್ಯಂತ ಮುಂದುವರಿಯುತ್ತಿದ್ದು ,ಇನ್ನೊಂದೆಡೆ ಬಿರುಸಿನ ರಾಜಕೀಯ ಚಟುವಟಿಕೆ ನಡೆಯುತ್ತಿದೆ.
ರಾಜ್ಯದ ನಿಲಂಬೂರ್ ಸಹಿತ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಕ್ಕೆ ಜೂನ್ 19ರಂದು ನಡೆಯುವ ಉಪಚುನಾವಣೆಗೆ ಚುನಾವಣಾ ಆಯೋಗ ಅಧಿಕೃತ ಪ್ರಕಟಣೆ ಹೊರಡಿಸಿದ ನಂತರ ರಾಜ್ಯದಲ್ಲಿ ಕಾವೇರಿದ ರಾಜಕೀಯ ಚಟುವಟಿಕೆಗಳು ಮುಂದುವರಿಯುತ್ತಿದೆ.ಜೂನ್ 23ರಂದು ಮತ ಎಣಿಕೆ ನಡೆಯಲಿದ್ದು ಜೂನ್ 2ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ.ಜೂನ್ 3ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಡರಂಗದ ಬೆಂಬಲದೊಂದಿಗೆ ಸ್ಪರ್ದಿಸಿ ವಿಜಯಿಯಾದ ಎ ಪಿ ಅನ್ವರ್ ಸರಕಾರ ರಚನೆಯಾದ ನಂತರ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹಾಗೂ ಎಡರಂಗದ ಆಡಳಿತದ ವಿರುದ್ಧ ಬಂಡೆದ್ದು ಮುಖ್ಯಮಂತ್ರಿ ಹಾಗೂ ಗ್ರಹಇಲಾಖೆಯ ಲೋಪಗಳ ಬಗ್ಗೆ ಬಹಿರಂಗವಾಗಿ ವಿಮರ್ಶಿಸಿ ಉನ್ನತ ಪೊಲೀಸ್ ಅಧಿಕಾರಿಗಳ ನೇಮಕದ ಬಗ್ಗೆ ಸರಕಾರವನ್ನು ವಿಮರ್ಶಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣಕ್ಕೆ ತೆರವಾದ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ.
ಕಾಂಗ್ರೆಸ್ ನ ಹಿರಿಯ ನಾಯಕರಾದ ಆರ್ಯಾದನ್ ಮೊಹಮ್ಮದ್ ರವರ ಪರಂಪರಾಗತ ಕ್ಷೇತ್ರವನ್ನು ಐಕ್ಯ ರಂಗದ ತೆಕ್ಕೆಯಿಂದ ಪಡೆದ ಎಡರಂಗಕ್ಕೆ ಈ ಕ್ಷೇತ್ರದ ಗೆಲುವು ಮಹತ್ವದ್ದಾಗಿತ್ತು .ಆದರೆ ನೂತನ ಶಾಸಕ ಸರಕಾರ ಹಾಗೂ ಮುಖ್ಯಮಂತ್ರಿ ಗಳ ಬಗ್ಗೆ ಬಹಿರಂಗವಾಗಿ ಅಪಸ್ವರ ವೆತ್ತಿದ ಕಾರಣ ಸರಕಾರ ಹಾಗೂ ಎಡರಂಗಕ್ಕೆ ತೀವ್ರ ಮುಜುಗರ ತಂದಿದ್ದರು.ಇದೀಗ ಅದೇ ಕ್ಷೇತ್ರವನ್ನು ಪಡೆಯಲು ಯು ಡಿ ಎಫ್ ಹಾಗೂ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಎಲ್ ಡಿ ಎಫ್ ಹರಸಾಹಸ ಪಡುತ್ತಿದೆ.ಈ ಕ್ಷೇತ್ರದ ಗೆಲುವು ಉಭಯ ರಂಗಗಳಿಗೆ ಕಬ್ಬಿಣದ ಕಡಲೆಯಂತಾಗಿದೆ.
ಯು ಡಿ ಎಫ್ ಈಗಾಗಲೇ ಚುನಾವಣಾ ಅಭ್ಯರ್ಥಿಯಾಗಿ ಆರ್ಯಾದನ್ ಶೌಕತ್ ರವರನ್ನು ಆರಿಸಿ ಚುನಾವಣಾ ರಂಗದಲ್ಲಿ ಸಕ್ರಿಯವಾಗಿದೆ.ಎಡರಂಗ ಒಂದೆರಡು ದಿನಗಳಲ್ಲಿ ಅಭ್ಯರ್ಥಿಯ ಆಯ್ಕೆ ಅಂತಿಮಗೊಳಿಸಲಿದೆ ಎಂದು ತಿಳಿಸಿದೆ.ಬಿ ಜೆ ಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಈ ಚುನಾವಣೆಯ ಅಗತ್ಯವೇ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ,ಪಕ್ಷವು ಅಭ್ಯರ್ಥಿಯನ್ನು ಹಾಕುವುದಿಲ್ಲವೆಂದು ತಿಳಿಸಿದ್ದಾರೆ.
ಏನ್ ಡಿ ಎ ಅಂಗ ಪಕ್ಷವಾದ ಬಿ ಜೆ ಡಿ ಎಸ್ ಅಭ್ಯರ್ಥಿಗೆ ಬೆಂಬಲ ನೀಡುವುದು ಬಹುತೇಕ ಖಚಿತವಾಗಿದೆ. ಬಿ ಜೆ ಡಿ ಎಸ್ ನಾಯಕ ತುಷಾರ್ ವೆಳ್ಳಪಲ್ಲಿ ಚುನಾವಣೆಗೆ ಅಭ್ಯರ್ಥಿಯನ್ನು ಹಾಕಲಾಗುವುದೆಂದು ತಿಳಿಸಿದ್ದಾರೆ.
ಈ ಮದ್ಯೆ ಎಡರಂಗದಿಂದ ವಿಜಯಿಯಾಗಿ ಬಂಡೆದ್ದು ರಾಜೀನಾಮೆ ನೀಡಿದ ಶಾಸಕ ಎ ಪಿ ಅನ್ವರ್ ರನ್ನು ಯು ಡಿ ಎಫ್ ತನ್ನ ತೆಕ್ಕೆಗೆ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿದೆ.ಯು ಡಿ ಎಫ್ ನ ಅಭ್ಯರ್ಥಿಯ ಬಗ್ಗೆ ಈ ಮೊದಲು ಟೀಕೆಗಳನ್ನು ಮಾಡಿದ ಅನ್ವರ್ ಯು ಡಿ ಎಫ್ ಗೆ ಹಾಗೂ ಅದೇ ಅಭ್ಯರ್ಥಿಗೆ ಬೆಂಬಲ ನೀಡುವುದು ಅನ್ವರ್ ಗೆ ಇರಿಸು ಮುರಿಸು ಉಂಟಾಗಿದೆ.ಸಿ ಪಿ ಐ ಎಂ ಈಗಾಗಲೇ ಎ ಪಿ ಅನ್ವರ್ ನಡೆಯನ್ನು ವ್ಯಂಗ್ಯ ಮಾಡಿದೆ.ಆದರೆ ಎ ಪಿ ಅನ್ವರ್ ಯು ಡಿ ಎಫ್ ಬೆಂಬಲಿಸುವ ಬಗ್ಗೆ ಯಾವುದೇ ನಿರ್ಧಾರ ಇನ್ನೂ ಕೈಗೊಂಡಿಲ್ಲ. ವಿರೋಧ ಪಕ್ಷದ ನಾಯಕ ವಿ ಡಿ ಸತೀಶನ್ ಅನ್ವರ್ ಯು ಡಿ ಎಫ್ ಸೇರುವ ಬಗ್ಗೆ ಮೊದಲು ತೀರ್ಮಾನ ಮಾಡಲಿ ಎಂದು ಹೇಳಿದ್ದಾರೆ.
ಒಟ್ಟಿನಲ್ಲಿ ಕಳೆದು ಹೋದ ನಿಲಂಬೂರ್ ಕ್ಷೇತ್ರವನ್ನು ಪುನಃ ಪಡೆಯಲು ಯು ಡಿ ಎಫ್,ಕಳೆದ ಚುನಾವಣೆಯಲ್ಲಿ ತಮ್ಮ ತೆಕ್ಕೆಗೆ ಬಂದ ಕ್ಷೇತ್ರವನ್ನು ತಮ್ಮಲ್ಲೇ ಉಳಿಸಿಕೊಂಡು ರಾಜಕೀಯ ವಿರೋಧಿಗಳಿಗೆ ಪ್ರತ್ಯುತ್ತರ ನೀಡಲು ಎಡಬಲ ರಂಗಗಳು ತೀವ್ರ ತರದ ಹಗ್ಗ ಜಗ್ಗಾಟ ನಡೆಸುತ್ತಿದೆ.ಈ ಎಲ್ಲಾ ಕುತೂಹಲಗಳಿಗೆ ಅಂತಿಮ ಉತ್ತರ ಸಿಗಲು ಜೂನ್ 23 ರ ವರೆಗೆ ಕಾಯಲೇ ಬೇಕು