ಮಂಜೇಶ್ವರ: ಹೈಕೋರ್ಟ್ ವಿಚಾರಣೆ ಮುಂದೂಡಿದ ಹಿನ್ನೆಲೆ ಕಡ್ಡಾಯ ಟೋಲ್ ವಸೂಲಿ ಪುನರಾರಂಭವಾದುದನ್ನು ವಿರೋಧಿಸಿ ಮಂಜೇಶ್ವರ ಟೋಲ್ ಪ್ಲಾಝದಲ್ಲಿ ಗಲಾಟೆ ನಡೆದಿದ್ದು, ಟೋಲ್ ಗೇಟ್ ಮೇನೇಜರ್ ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪದ ಮೇರೆಗೆ ಟೋಲ್ ವಿರೋಧಿ ಕ್ರಿಯಾ ಸಮಿತಿ ನಾಯಕರೊಬ್ಬರು ಸೇರಿ ಹತ್ತು ಮಂದಿಯ ವಿರುದ್ಧ ಕುಂಬಳೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹರಿಯಾಣ ಮೂಲದ ಟೋಲ್ ಬೂತ್ ಮೇನೇಜರ್ ಅಮಿತ್ ಕುಮಾರ್ ನೀಡಿದ ದೂರಿನ ಪ್ರಕಾರ, ಜ.28ರ ರಾತ್ರಿ ಗುಂಪಾಗಿ ಬಂದವರು ಟೋಲ್ ಗೇಟ್ನಲ್ಲಿ ವಾಹನ ಸಂಚಾರ ತಡೆದು, ಅವಾಚ್ಯ ಪದಗಳಿಂದ ನಿಂದಿಸಿ ತನ್ನ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾರೆಂದು ದೂರಿನಲ್ಲಿ ಆರೋಪಿಸಲಾಗಿದೆ.
ಕಡ್ಡಾಯ ಟೋಲ್ ವಸೂಲಿಗೆ ವಿರೋಧ ವ್ಯಕ್ತಪಡಿಸಿ ಟೋಲ್ ವಿರೋಧಿ ಕ್ರಿಯಾ ಸಮಿತಿ ಕಾರ್ಯಕರ್ತರಾದ ಸಿ.ಎ.ಸುಬೈರ್ ಮತ್ತು ಅಶ್ರಫ್ ಕಾರ್ಲೆ ನೇತೃತ್ವದಲ್ಲಿ ಟೋಲ್ ಗೇಟ್ ಬಳಿ ತೆರಳಿ ಮೇನೇಜರನ್ನು ಪ್ರಶ್ನಿಸಿ ವಸೂಲಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದರು. ಈ ಘಟನೆಯ ವಿಡಿಯೋ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಡಿದ್ದು, ನಂತರ ಪ್ರಕರಣ ದಾಖಲಾಗಿದೆ.ಪೊಲೀಸರು ಘಟನೆಯ ಕುರಿತು ತನಿಖೆ ಮುಂದುವರಿಸಿದ್ದಾರೆ.