ಶ್ರೀ ಸದಾಶಿವ ಶೆಟ್ಟಿ ಸೇವಾ ಬಳಗ ಕೇಂದ್ರೀಯ ಸಮಿತಿ ಹಾಗೂ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಸಹಯೋಗದಲ್ಲಿ ಏಪ್ರಿಲ್ 19ರಂದು ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ವೈದ್ಯಕೀಯ ಹಾಗೂ ರಕ್ತದಾನ ಶಿಬಿರ ನಡೆಯಲಿದೆ.
ಕಾರ್ಯಕ್ರಮವನ್ನು ಹೇರಂಭ ಇಂಡಸ್ಟ್ರೀಸ್ ಸಂಸ್ಥಾಪಕಾಧ್ಯಕ್ಷರು ಹಾಗೂ ಸೇವಾ ಬಳಗದ ಕೇಂದ್ರೀಯ ಸಮಿತಿ ಅಧ್ಯಕ್ಷ ಡಾ . ಸದಾಶಿವ ಕೆ. ಶೆಟ್ಟಿ ಕುಳೂರು ಕನ್ಯಾನ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಉಪಾಧ್ಯಕ್ಷ ನಾರಾಯಣ ನೈಕ್ ನಡುಹಿತ್ಲು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಕೆ.ಎಸ್ ಹೆಗ್ಡೆ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈಸ್ ಚಾನ್ಸಲರ್ ಡಾ. ಸತೀಶ್ ಭಂಡಾರಿ, ಖ್ಯಾತ ಎಲುಬು ತಜ್ಞ ಡಾ. ಅಶ್ವಿನ್ ಶೆಟ್ಟಿ , ಡಾ. ವಿಕ್ರಮ್ ದತ್ತ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಸಂಘಟನೆಯ ಉಪಾಧ್ಯಕ್ಷ ಚಂದ್ರಹಾಸ ಶೆಟ್ಟಿ, ಮೀಂಜ ಗ್ರಾಮ ಪಂಚಾಯತ್ ಸದಸ್ಯೆ ಶರ್ಮಿಳಾ ಎಂ. ಶೆಟ್ಟಿ, ಕುಳೂರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಾಲತಿ ಹಾಗೂ ಡಾ. ಪುನೀತ ಶೆಟ್ಟಿ ಉಪಸ್ಥಿತರಿರುವರು.
ಶಿಬಿರದಲ್ಲಿ ಎಲುಬು ಮತ್ತು ಕೀಲು ಚಿಕಿತ್ಸೆ, ಕಣ್ಣು, ಚರ್ಮ ಹಾಗೂ ಮಕ್ಕಳ ಚಿಕಿತ್ಸೆಯೊಂದಿಗೆ ಇಸಿಜಿ, ಇಎನ್ಟಿ ಮತ್ತು ಜನರಲ್ ಮೆಡಿಸಿನ್ ವಿಭಾಗಗಳಲ್ಲಿ ತಜ್ಞರಿಂದ ಉಚಿತ ತಪಾಸಣೆ ನಡೆಯಲಿದೆ. ಅಗತ್ಯ ಔಷಧಿ ಹಾಗೂ ಕನ್ನಡಕ ವಿತರಣೆ ನಡೆಯಲಿದೆ . ಸಾರ್ವಜನಿಕರು ಇದರ ಉಪಯೋಗವನ್ನು ಪಡೆದು ಕೊಳ್ಳಬಹುದಾಗಿದೆ.