ಕುಂಬಳೆ, ಮೇ 7: ಕುಂಬಳೆ ಪಟ್ಟಣದಲ್ಲಿ ಜಾರಿಗೆ ತರಲಾಗಿದ್ದ ಟ್ರಾಫಿಕ್ ವ್ಯವಸ್ಥೆಯ ನಿರ್ಧಾರ ಅನುಷ್ಠಾನವಾಗದ ಹಿನ್ನೆಲೆಯಲ್ಲಿ ವ್ಯಾಪಾರಿಗಳು ಹಾಗೂ ಪ್ರಯಾಣಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಹಿಂದಿನ ಪಂಚಾಯತ್ ಆಡಳಿತ ಸಮಿತಿ 2025ರ ಅಕ್ಟೋಬರ್ 23ರಂದು ಕೈಗೊಂಡ ನಿರ್ಧಾರದಂತೆ, ಪೇರಾಲ್ ಕಣ್ಣೂರು, ಸೀತಾಂಗೋಳಿ, ಪೆರ್ಲ, ಸುಳ್ಯ, ಬದಿಯಡ್ಕ ಮತ್ತು ಮುಳ್ಳೇರಿಯಾ ಭಾಗಗಳಿಗೆ ತೆರಳುವ ಬಸ್ಗಳು ಪ್ರಯಾಣಿಕರ ಅನುಕೂಲಕ್ಕಾಗಿ ಹಳೆಯ ಬಸ್ ನಿಲ್ದಾಣದಲ್ಲಿ ಐದು ನಿಮಿಷ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಳಿಸುವ ವ್ಯವಸ್ಥೆ ಜಾರಿಗೊಳಿಸಲು ಸೂಚಿಸಲಾಗಿತ್ತು.
ಆದರೆ ಇದುವರೆಗೆ ಈ ನಿರ್ಧಾರ ಜಾರಿಯಾಗದ ಕಾರಣ ಪ್ರಯಾಣಿಕರು ಮತ್ತು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಬಸ್ ಮಾಲೀಕರ ಸಂಘ ಹಾಗೂ ವ್ಯಾಪಾರಿ-ವ್ಯವಸಾಯಿ ಏಕೋಪನ ಸಮಿತಿಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚೆಗೆ ಪಂಚಾಯತ್ ಅಧ್ಯಕ್ಷ ವಿ.ಪಿ. ಅಬ್ದುಲ್ ಖಾದರ್ ಹಳೆಯ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ಬಸ್ ಮಾಲೀಕರಿಗೆ ಕಠಿಣ ಸೂಚನೆ ನೀಡಿದ್ದರು. ಆದರೂ ಟ್ರಾಫಿಕ್ ನಿಯಂತ್ರಣ ಸಮಿತಿಯ ನಿರ್ಧಾರ ಸಂಬಂಧಪಟ್ಟವರಿಂದ ಸಮರ್ಪಕ ಪ್ರಯತ್ನ ನಡೆಯುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಯುವ ಘಟಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದು, ಪೊಲೀಸ್ ಠಾಣೆ ಮುತ್ತಿಗೆ ಸೇರಿದಂತೆ ವಿವಿಧ ಹೋರಾಟ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತನೆ ನಡೆಸಿದೆ.