ಕೊಣಾಜೆ: ಪಾವೂರು ಗ್ರಾಮದ ಇನೋಳಿಗೆ ಸರ್ಕಾರಿ ಬಸ್ ಸೇವೆ ಆರಂಭಿಸುವಂತೆ ಆಗ್ರಹಿಸಿ ಸರ್ಕಾರಿ ಬಸ್ ಹೋರಾಟ ಸಮಿತಿಯ ನೇತೃತ್ವದಲ್ಲಿ ಮಲಾರ್ ಪದವಿನ ಸೆಂಟ್ರಲ್ ಮುಸ್ಲಿಂ ಶಾಲೆ ಬಳಿ ಭಾನುವಾರ ಸಹಿ ಸಂಗ್ರಹ ಅಭಿಯಾನ ನಡೆಸಲಾಯಿತು.
ಇನೋಳಿಗೆ ಸರ್ಕಾರಿ ಬಸ್ ಓಡಾಟ ಆರಂಭಿಸುವಂತೆ ಗ್ರಾಮ ಪಂಚಾಯಿತಿ, ಸಚಿವರು ಹಾಗೂ ಕೆಎಸ್ಸಾರ್ಟಿಸಿ ಅಧಿಕಾರಿಗಳಿಗೆ ಈಗಾಗಲೇ ಮನವಿ ಸಲ್ಲಿಸಿದ್ದರೂ ಇದುವರೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಸಮಿತಿ ಮುಖಂಡರು ಆರೋಪಿಸಿದ್ದಾರೆ.
ಸರ್ಕಾರಿ ಬಸ್ ಸೇವೆ ಇಲ್ಲದ ಕಾರಣ ರಾಜ್ಯ ಸರ್ಕಾರದ ಮಹತ್ವದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆಯ ಪ್ರಯೋಜನದಿಂದ ಗ್ರಾಮದ ಮಹಿಳೆಯರು ವಂಚಿತರಾಗುತ್ತಿದ್ದಾರೆ ಎಂದು ಅವರು ತಿಳಿಸಿದರು.
ಇನೋಳಿಗೆ ಬಸ್ ಸೇವೆ ಆರಂಭವಾದರೆ ಕೇವಲ ಪಾವೂರು ಗ್ರಾಮದ ಜನರಿಗೆ ಮಾತ್ರವಲ್ಲದೆ ಪಜೀರ್, ಹರೇಕಳ ಹಾಗೂ ಕೊಣಾಜೆ ಗ್ರಾಮದ ಜನರಿಗೂ ಅನುಕೂಲವಾಗಲಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಕ್ರಮ ಕೈಗೊಂಡು ಸರ್ಕಾರಿ ಬಸ್ ಸಂಚಾರ ಆರಂಭಿಸಬೇಕು ಎಂದು ಆಗ್ರಹಿಸಿದರು.
ಸಹಿ ಸಂಗ್ರಹ ಅಭಿಯಾನದಲ್ಲಿ ಹೋರಾಟ ಸಮಿತಿಯ ಮುಖಂಡರಾದ ಬಶೀರ್ ಅಕ್ಷರನಗರ, ಸಮೀರ್ ಟಿಪ್ಪುನಗರ, ಆಸೀಫ್ ಬದ್ರಿಯಾನಗರ, ಎಂ.ಕೆ. ಕಮರ್, ಎಂ.ಕೆ. ಸಮದ್, ಸಮದ್ ಗಾಡಿಗದ್ದೆ, ಆರ್. ಮಜೀದ್, ಇಕ್ಬಾಲ್ ಇನೋಳಿ, ಹನೀಫ್ ಕೋಡಿಕಲ್, ಹಂಝ ರಹ್ಮತ್ ನಗರ ಸೇರಿದಂತೆ ಹಲವರು ಭಾಗವಹಿಸಿದ್ದರು.