ಮಂಜೇಶ್ವರ : ನೂತನವಾಗಿ ನಿರ್ಮಾಣಗೊಂಡ ತಲಪಾಡಿ ಷಟ್ಪಥ ರಾಷ್ಟ್ರೀಯ ಹೆದ್ದಾರಿ ಸಾರ್ವಜನಿಕರ ಸುಲಭ ಹಾಗೂ ವೇಗದ ಸಾರಿಗೆಗಾಗಿ ನಿರ್ಮಿತವಾಗಿದ್ದರೂ, ಇತ್ತೀಚಿನ ರಸ್ತೆಯ ಮೇಲೆ ಅಲೆಮಾರಿ ದನಗಳ ಅಡ್ಡಾದಿಡ್ಡಿ ಅಲೆದಾಟದಿಂದಾಗಿ ವಾಹನ ಸವಾರರು ಅಪಾಯದ ಭೀತಿಯನ್ನು ಎದುರಿಸುವಂತಾಗಿದೆ.
ಪ್ರತಿ ದಿನವೂ ಹಲವು ಸಮೀಪ ಪ್ರದೇಶದಿಂದ ಹತ್ತಾರು ದನಗಳು ರಸ್ತೆಗೆ ಪ್ರವೇಶಿಸುತ್ತಿದ್ದು, ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಈ ಘಟನೆಗಳು ಹೆಚ್ಚಾಗಿ ಕಾಣಿಸುತ್ತಿವೆ. ದನ ಸಾಕುವವರು ಸೂಕ್ತವಾದ ಸ್ಥಳಗಳಲ್ಲಿ ದನಗಳನ್ನು ಮೇಯಲು ಬಿಡದೆ ಬೇಕಾಬಿಟ್ಟಿಯಾಗಿ ಬಿಡುತ್ತಿರುವ ಹಿನ್ನೆಲೆಯಲ್ಲಿ
ಈ ದನಗಳು ನೇರವಾಗಿ ಹೆದ್ದಾರಿಯ ಮೇಲೆ ಹರಿದು ಬರುತ್ತಿವೆ.
ರಸ್ತೆ ನಿರ್ಮಾಣ ಪೂರ್ಣವಾಗಿದ್ದರೂ ರಸ್ತೆ ಬದಿಯ ಬೆಳಕುಗಳನ್ನು ಇನ್ನೂ ಸ್ಥಾಪಿಸದೇ ಇರುವ ಹಿನ್ನೆಲೆಯಲ್ಲಿ ರಾತ್ರಿ ಹೊತ್ತಿನಲ್ಲಿ ವಾಹನ ಸವಾರರರು ದನಗಳನ್ನು ಹತ್ತಿರದಿಂದ ಕಾಣುವಾಗ ತೀವ್ರ ಬ್ರೇಕ್ ಹಾಕುವ ಪರಿಸ್ಥಿತಿ ಎದುರಾಗುತ್ತಿದೆ. ಇದು ಅಪಘಾತಗಳಿಗೂ ಕಾರಣವಾಗುತ್ತಿದೆ.
ದೈನಂದಿನ ಪ್ರಯಾಣದಲ್ಲಿ ಅಲೆಮಾರಿ ದನಗಳು ರಸ್ತೆಯಲ್ಲಿ ಇದ್ದರೆ, ವಾಹನಚಾಲಕರಿಗೆ ಸಮಯ ನಷ್ಟದ ಜೊತೆಯಾಗಿ ಮಾನಸಿಕ ಒತ್ತಡ ಕೂಡಾ ಹೆಚ್ಚಾಗುತ್ತಿದೆ.
ಸಂಬಂಧಿತ ಅಧಿಕಾರಿಗಳಿಗೆ ಸಮಸ್ಯೆಯ ಅರಿವು ಆಭಿಸಿದ್ದರೂ ಕೂಡ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬುದು ಸಾರ್ವಜನಿಕರ ಆರೋಪ.
ಅಲೆಮಾರಿ ದನಗಳನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಕಾರ್ಯಾಚರಣೆ ಜೊತೆಗೆ ಪಶುಧನ ಮಾಲೀಕರಿಗೆ ಕಾನೂನಾತ್ಮಕ ಎಚ್ಚರಿಕೆ ಹಾಗೂ ದಂಡ ವಿಧಿಸುವ ವ್ಯವಸ್ಥೆಯನ್ನು ಸ್ಥಳೀಯಾಡಳಿತ ಮಾಡಬೇಕಾಗಿದೆ.
ತಲಪಾಡಿ ಷಟ್ಪಥ ರಸ್ತೆ ನಾಗರಿಕರ ಭದ್ರತೆಗಾಗಿ ನಿರ್ಮಾಣವಾದರೂ, ಅಲೆಮಾರಿ ದನಗಳ ಅಟ್ಟಹಾಸ ಜನಜೀವನಕ್ಕೊಂದು ಭೀತಿಯಾಗಿದೆ.. ಸಂಬಂಧ ಪಟ್ಟ ಇಲಾಖೆಗಳು ತಕ್ಷಣ ಕ್ರಮ ಕೈಗೊಂಡು, ಸಾರ್ವಜನಿಕರ ಸುರಕ್ಷತೆಯನ್ನು ಖಾತರಿಪಡಿಸಬೇಕಾದ ಅಗತ್ಯವಿದೆ.