ಮಂಜೇಶ್ವರ : ಮಂಜೇಶ್ವರ ರೈಲ್ವೇ ನಿಲ್ದಾಣದ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಅಂತಿಮ ಹಂತಕ್ಕೆ ತಲುಪಿದ್ದರೂ ಪ್ರಧಾನ ಕಟ್ಟಡವು ತೀರಾ ಶೋಚನೀಯಾವಸ್ಥೆಯಲ್ಲಿ ಮುಂದುವರಿಯುತ್ತಿದೆ. ನಿಲ್ದಾಣದ ಕಚೇರಿ ಕಾರ್ಯಾಚರಿಸುತ್ತಿರುವ ಕಟ್ಟಡ ಇದೀಗ ಆರಂಭಗೊಳ್ಳಲು ಮೇಲಾಧಿಕಾರಿಗಳ ಹಸಿರು ನಿಶಾನೆಗಾಗಿ ಕಾಯುತ್ತಿದೆ.
ಬಹಳ ಹಳೆಯದಾಗಿರುವ ಕಟ್ಟಡವೊಂದರಲ್ಲಿ ನಿಲ್ದಾಣದ ಕಚೇರಿ ಇದೀಗ ಕಾರ್ಯಾಚರಿಸುತ್ತಿದೆ. ಮಳೆ ಬಿರುಸುಗೊಳ್ಳುತಿದ್ದಂತೆ ಸೋರಲಿಕ್ಕೂ ಶುರುವಾಗಿದೆ. ನೀರಿನ ಸೋರಿಕೆಯನ್ನು ತಡೆಯಲು ಮೇಲ್ಭಾಗಕ್ಕೆ ಪ್ಲಾಸ್ಟಿಕ್ ಹೊದಿಕೆಯ ಜೊತೆಯಾಗಿ ಶೀಟನ್ನು ಹಾಕಲಾಗಿದೆ. ಟಿಕೆಟ್ ಕೌಂಟರ್ ಹಾಗೂ ಸ್ಟೇಶನ್ ಮಾಸ್ಟರ್ ಕಚೇರಿಯ್ಲಲೂ ಇದೆ ಶೋಚನೀಯಾವಸ್ಥೆ ಇದೆ.
ನಿರ್ಮಾಣ ಪೂರ್ಣಗೊಂಡು ತಿಂಗಳುಗಳೇ ಕಳೆದರೂ ರೈಲ್ವೇ ನಿಲ್ದಾಣ ಅಭಿವೃದ್ಧಿಯ ಭಾಗವಾಗಿ ಟಿಕೆಟ್ ಕೌಂಟರ್ ಹಾಗೂ ಇತರ ಕಚೇರಿಗಳಿಗಾಗಿ ನಿರ್ಮಿಸಲಾದ ಕಟ್ಟಡವನ್ನು ಇಷ್ಟರ ತನಕ ತೆರೆದು ಕೊಟ್ಟಿಲ್ಲ. ನವೀಕರಣದ ಭಾಗವಾಗಿ ಟಿಕೆಟ್ ಕೌಂಟರನ್ನು ಪ್ರಸ್ಥುತ ಕಟ್ಟಡದ ಹಿಂಬಾಗಕ್ಕೆ ಬದಲಿಸಿ ಬಹಳ ಸಮಯಗಳೇ ಕಳೆದಿದೆ. ಇದು ಕೂಡಾ ಪ್ರಯಾಣಿಕರಿಗೆ ಭಾರೀ ಸಮಸ್ಯೆಯನ್ನು ಸೃಷ್ಟಿಸಿದೆ. ಸ್ಪೇಶನ್ ನಲ್ಲಿ ಹೊಸ ಸಿಗ್ನಲ್ ಕಟ್ಟಡವನ್ನು ನಿರ್ಮಿಸಿದರೆ ಮಾತ್ರ ಹಳೆಯ ಕಟ್ಟಡವನ್ನು ತಪ್ಪಿಸಬಹುದಾಗಿದೆ.
ಮತ್ತೊಂದೆಡೆ ಇಂಟರ್ ಲಾಕ್ ಹಾಗೂ ವಿದ್ಯುತೀಕರಣದ ಕೆಲಸ ನಡೆಯುತ್ತಿದೆ. ಇದೆಲ್ಲಾ ಪೂರ್ಣಗೊಂಡ ಬಳಿಕವಷ್ಟೇ ನಿಲ್ದಾಣದ ಸಮಸ್ಯೆಗೊಂದು ಅಂತ್ಯ ಕಾಣಬಹುದು. ಈ ಸೋರುತ್ತಿರುವ ಕಟ್ಟಡದಲ್ಲಿ ಇನ್ನೆಷ್ಟು ಕಾಲ ಮುಂದುವರಿಯುಬೇಕೆಂಬುದು ಊರವರ ಹಾಗೂ ಪ್ರಯಾಣಿಕರ ಪ್ರಶ್ನೆ.ಸಂಬಂಧಪಟ್ಟವರು ಕೂಡಲೇ ಇತ್ತ ಗಮನ ಹರಿಸುವಂತೆ ಸ್ಥಳೀಯರು ಹಾಗೂ ಪ್ರಯಾಣಿಕರು ಆಗ್ರಹಿಸಿದ್ದಾರೆ