ಮಂಜೇಶ್ವರ : ಮಂಜೇಶ್ವರ ರೈಲ್ವೆ ನಿಲ್ದಾಣದ ಸಮೀಪವಿರುವ ವೇದಾವತಿ ಎಂಬವರ ಮನೆ ಹಠಾತ್ತಾಗಿ ಕುಸಿದುಬಿದ್ದಿದೆ. ತೀವ್ರ ಶಬ್ದ ಕೇಳಿ ಎಚ್ಚೆತ್ತ ಕುಟುಂಬದವರು ತಕ್ಷಣ ಮನೆಯಿಂದ ಹೊರಗೆ ಓಡಿಬಂದಿದ್ದರಿಂದ, ಸಂಭವಿಸಬಹುದಾಗಿದ್ದ ಭೀಕರ ಅನಾಹುತವೊಂದು ಅದೃಷ್ಟವಶಾತ್ ತಪ್ಪಿದೆ.


ಮನೆ ಕುಸಿದ ಪರಿಣಾಮ ಹೆಂಚಿನ ಛಾವಣಿ ಸಂಪೂರ್ಣವಾಗಿ ನೆಲಕಚ್ಚಿದ್ದು, ಮನೆಯಲ್ಲಿದ್ದ ವಸ್ತುಗಳಿಗೆ ತೀವ್ರ ಹಾನಿಯಾಗಿದೆ. ವಿಷಯ ತಿಳಿಯುತ್ತಿದ್ದಂತೆ ಬಿಜೆಪಿ ಮುಖಂಡ ಹರಿಶ್ಚಂದ್ರ ಮಂಜೇಶ್ವರ, ಸ್ಥಳೀಯ ವಾರ್ಡ್ ಸದಸ್ಯೆ ಹರಿಣಾಕ್ಷಿ ಮತ್ತು ಕಲ್ಕಿ ಮಂಜೇಶ್ವರದ ಅರುಣ್ ದುರ್ಗಿಪಳ್ಳ ಮೊದಲಾದವರು ಸ್ಥಳಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮನೆ ಶಿಥಿಲಗೊಂಡಿದ್ದೇ ಈ ದುರ್ಘಟನೆಗೆ ಕಾರಣವೆಂದು ಶಂಕಿಸಲಾಗಿದೆ.


