ಕಾಸರಗೋಡು:* ಮಂಗಲ್ಪಾಡಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಸಮೀಪ ಸಂಭವಿಸಿದ ಸ್ಕೂಟರ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಯುವಕ ಮೃತಪಟ್ಟಿದ್ದಾರೆ. ಚೌಕ್ಕಿ, ಕಾವುಗೋಳಿ ಶ್ವೇತಾ ನಿವಾಸದ ದಿವಂಗತ ಆನಂದ ಅವರ ಪುತ್ರ ಲೋಕೇಶ್ (42) ಇಂದು (ಬುಧವಾರ) ಬೆಳಿಗ್ಗೆ ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ವಿದ್ಯಾನಗರ ಜಿಲ್ಲಾ ಕೈಗಾರಿಕಾ ಕೇಂದ್ರದ ಸಮೀಪ ಲಾಟರಿ ಮಳಿಗೆ ನಡೆಸುತ್ತಿದ್ದ ಲೋಕೇಶ್, ಸುಮಾರು ಒಂದು ತಿಂಗಳ ಹಿಂದೆ ಅಪಘಾತಕ್ಕೀಡಾಗಿದ್ದರು. ಅವರು ಚಲಾಯಿಸುತ್ತಿದ್ದ ಸ್ಕೂಟರ್ ಮಂಗಲ್ಪಾಡಿ ಶಾಲೆ ಸಮೀಪ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಈ ವೇಳೆ ಗಂಭೀರ ಗಾಯಗೊಂಡಿದ್ದರು.

ಮೊದಲು ಅವರನ್ನು ಎರಡು ವಾರಗಳ ಕಾಲ ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ನುಳ್ಳಿಪ್ಪಾಡಿಯ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಬೇಕಿದ್ದ ಸಂದರ್ಭದಲ್ಲಿ ಅಚಾನಕ್ ಆರೋಗ್ಯ ಹದಗೆಟ್ಟು ಮೃತಪಟ್ಟಿದ್ದಾರೆ.

