ಕಾಸರಗೋಡು, ಜು. 17: ಉದ್ಯೋಗ ಸೃಷ್ಟಿ, ಸಮಾಜಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಗಣನೀಯ ಸೇವೆಯನ್ನು ಪರಿಗಣಿಸಿ ಬೆಳ್ಳಾರಿಯ ಖ್ಯಾತ ಉದ್ಯಮಿ, ಸಮಾಜಸೇವಕ ಹಾಗೂ ವರ್ಷಿಣಿ ಎಂಟರ್ಪ್ರೈಸಸ್ನ ಸಂಸ್ಥಾಪಕರಾದ ಶ್ರೀ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರಿಗೆ ಗಡಿನಾಡು ಕಾಸರಗೋಡಿನ ಪ್ರತಿಷ್ಠಿತ ಕನ್ನಡ ಸಂಸ್ಥೆಯಾದ ಕನ್ನಡ ಭವನ ನೀಡುವ ಅಂತರ್ರಾಜ್ಯ ‘ಕನ್ನಡ ಪಯಸ್ವಿನಿ – ಉದ್ಯೋಗ ರತ್ನ’ ಅಚೀವ್ಮೆಂಟ್ ಅವಾರ್ಡ್-2026ಕ್ಕೆ ಆಯ್ಕೆ ಮಾಡಲಾಗಿದೆ.

ವರ್ಷಿಣಿ ಎಂಟರ್ಪ್ರೈಸಸ್ ಮೂಲಕ 3 ಸಾವಿರಕ್ಕೂ ಅಧಿಕ ಮಂದಿಗೆ ಉದ್ಯೋಗಾವಕಾಶ ಕಲ್ಪಿಸಿರುವ ಶ್ರೀ ಶೇರುಗಾರ್ ಅವರು ಉದ್ಯೋಗದಾತರಾಗಿ, ಸಮಾಜಸೇವಕರಾಗಿ, ಧಾರ್ಮಿಕ ಸೇವಾಕರ್ತರಾಗಿ ಹಾಗೂ ಕೊಡುಗೈ ದಾನಿಯಾಗಿ ರಾಜ್ಯಾದ್ಯಂತ ಗುರುತಿಸಿಕೊಂಡಿದ್ದಾರೆ.
ಡಾ. ಕೆ. ವಾಮನ್ ರಾವ್ ಬೇಕಲ್ ಹಾಗೂ ಸಂಧ್ಯಾರಾಣಿ ಟೀಚರ್ ಅವರ ಸಾರಥ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಕನ್ನಡ ಭವನವು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿರುವ ಸಾಧಕರನ್ನು ಗುರುತಿಸಿ ಪ್ರತಿವರ್ಷ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿದೆ.

ಶ್ರೀ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರು ಹಲವು ಸಾಮಾಜಿಕ, ಧಾರ್ಮಿಕ ಹಾಗೂ ಸೇವಾ ಸಂಸ್ಥೆಗಳಲ್ಲಿ ಪದಾಧಿಕಾರಿ, ನಿರ್ದೇಶಕ ಮತ್ತು ಪೋಷಕರಾಗಿ ಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೆ, ವಿಶ್ವ ರಾಮ ಕ್ಷತ್ರಿಯ ಮಹಾಸಂಘ (ರಿ.), ಕುಂದಾಪುರ ಇದರ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದು, ಸಮಾಜಮುಖಿ ಚಟುವಟಿಕೆಗಳ ಮೂಲಕ ವಿಶೇಷ ಗುರುತಿಸಿಕೊಂಡಿದ್ದಾರೆ.

ಜುಲೈ 26ರಂದು ಕನ್ನಡ ಭವನದ ರಜತ ಸಂಭ್ರಮ ಸಮಾರೋಪದ ಅಂಗವಾಗಿ ನಡೆಯಲಿರುವ ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನದಲ್ಲಿ ಶ್ರೀ ಕೋತ್ವಾಲ್ ಪದ್ಮನಾಭ ಶೇರುಗಾರ್ ಅವರಿಗೆ ‘ಕನ್ನಡ ಪಯಸ್ವಿನಿ – ಉದ್ಯೋಗ ರತ್ನ’ ಅಚೀವ್ಮೆಂಟ್ ಅವಾರ್ಡ್-2026 ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್. ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ. ವಾಮನ್ ರಾವ್ ಬೇಕಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

