ಕಾಸರಗೋಡು: ವಿವಾಹ ವಾಗ್ದಾನ ನೀಡಿ ಯುವತಿಯನ್ನು ಹಲವು ಬಾರಿ ಪೀಡಿಸಿದ ಪ್ರಕರಣದಲ್ಲಿ ಕೊಯಿಪ್ಪಾಡಿ ಮೂಲದ ಯುವಕನಿಗೆ 10 ವರ್ಷ ಕಠಿಣ ಕಾರಾಗೃಹ ವಾಸ ಮತ್ತು ಅರ್ಧ ಲಕ್ಷ ರೂಪಾಯಿ ದಂಡ ವಿಧಿಸಿ ಕಾಸರಗೋಡು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ರಜಿತ ತೀರ್ಪು ನೀಡಿದ್ದಾರೆ.

ಕೊಯಿಪ್ಪಾಡಿ ಬದ್ರಿಯಾ ನಗರದ ಪುರುಷೋತ್ತಮ (40) ಶಿಕ್ಷೆಗೆ ಒಳಗಾದ ವ್ಯಕ್ತಿ. ದಂಡದ ಮೊತ್ತವನ್ನು ಪಾವತಿಸದಿದ್ದರೆ ಹೆಚ್ಚುವರಿಯಾಗಿ 6 ತಿಂಗಳು ಕಠಿಣ ತಂಡ ಅನುಭವಿಸಬೇಕಾಗುತ್ತದೆ ಎಂದು ನ್ಯಾಯಾಲಯ ಆದೇಶಿಸಿದೆ.

2019 ಜೂನ್ 2 ರಂದು ಆರೋಪಿಯ ಮನೆಯಲ್ಲಿ ಹಾಗೂ ಕಾಞಂಗಾಡ್ ಚಾಮುಂಡಿಕ್ಕುಂಟಿನ ಸಂಬಂಧಿಕರ ಮನೆಯಲ್ಲಿ ಯುವತಿಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಲಾಗಿದೆ ಎಂಬುದು ಪ್ರಕರಣದ ವಿವರವಾಗಿದೆ.

ಈ ಕುರಿತು ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ಮೊದಲ ಹಂತದ ತನಿಖೆಯನ್ನು ಇನ್ಸ್ಪೆಕ್ಟರ್ ಎಂ.ಪಿ. ಅನಿಲ್ ನಡೆಸಿದ್ದರೆ, ತನಿಖೆಯನ್ನು ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿದವರು ಇನ್ಸ್ಪೆಕ್ಟರ್ ಪ್ರಮೋದ್ ಆಗಿದ್ದಾರೆ.
ವಿಚಾರಣೆ ವೇಳೆ ಪ್ರೋಸಿಕ್ಯೂಷನ್ ಪರವಾಗಿ 19 ಸಾಕ್ಷಿಗಳನ್ನು ವಿಚಾರಣೆ ನಡೆಸಲಾಗಿದ್ದು, 28 ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

