ಕಾಸರಗೋಡು: ಉಪ್ಪಳ ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ ಆಶ್ರಯದಲ್ಲಿ, ಕೇರಳದ ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಕೇರಳದ ಪ್ರಸಿದ್ಧ ನಾಟಿ ವೈದ್ಯರುಗಳಿಂದ ಕರ್ಕಾಟಕ ಮಾಸದ ಔಷಧ ಗಂಜಿ ಮತ್ತು ‘ಆಯುಶ್ರೀ ಪ್ರಶಸ್ತಿ 2026’ ಕಾರ್ಯಕ್ರಮವನ್ನು ಆಗಸ್ಟ್ 9ರಂದು ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದಲ್ಲಿ ಆಯೋಜಿಸಲಾಯಿತು.


ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಔಷಧೀಯ ಗಂಜಿಯ ಮಹತ್ವ, ತಿನ್ನಬಹುದಾದ ಕಾಡು ಸಸ್ಯಗಳು ಹಾಗೂ ಪಾರಂಪರಿಕ ಆಹಾರ ಪದ್ಧತಿಗಳ ಕುರಿತು ತಜ್ಞರಿಂದ ಮಾಹಿತಿ ನೀಡಲಾಯಿತು. ಕಣ್ಣೂರಿನ ಶ್ರೀ ಪವಿತ್ರನ್ ಗುರುಕ್ಕಲ್ ಅವರು ಔಷಧೀಯ ಗಂಜಿಯ ಮಹತ್ವದ ಕುರಿತು ಮಲಯಾಳಂನಲ್ಲಿ ಉಪನ್ಯಾಸ ನೀಡಿದರು. ಜೈವವೈವಿಧ್ಯ ಸಂಶೋಧಕ ವಿ.ಸಿ. ಬಾಲಕೃಷ್ಣನ್ ಅವರು ತಿನ್ನಬಹುದಾದ ಕಾಡು ಸಸ್ಯಗಳ ಕುರಿತು ಮಾಹಿತಿ ಹಂಚಿಕೊಂಡರು.

ತಲಪಾಡಿಯ ಶಾರದಾ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಧ್ಯಾಪಕ ಡಾ. ಅನೂಪ್ ಅವರು ಕನ್ನಡದಲ್ಲಿ ಔಷಧೀಯ ಗಂಜಿಯ ಆರೋಗ್ಯ ಮಹತ್ವವನ್ನು ವಿವರಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಮಠದ ಪರಮಪೂಜ್ಯ ಶ್ರೀ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಿದರು. ತುಳುನಾಡು ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ. ಎಂ.ಬಿ. ಪುರಾಣಿಕ್ ಅಧ್ಯಕ್ಷತೆ ವಹಿಸಿದ್ದರು.
ಸನ್ಸನ್ ಹರ್ಬಲ್ಸ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸೂರ್ಯ ಟ್ರಸ್ಟ್ ಪಯ್ಯನ್ನೂರಿನ ಅಧ್ಯಕ್ಷ ಶಿವಪ್ರಸಾದ್ ಎಸ್. ಶೆಣೈ, ಶ್ರೀ ನಿತ್ಯಾನಂದ ಆಯುರ್ವೇದ ಸಂರಕ್ಷಣಾ ಸಮಿತಿ ಕೇರಳದ ಅಧ್ಯಕ್ಷ ಜಯದೇವನ್ ಕಣ್ಣೂರು ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ‘ಆಯುಶ್ರೀ 2026’ ಪ್ರಶಸ್ತಿಯನ್ನು ಪ್ರಸಿದ್ಧ ಪಾರಂಪರಿಕ ವೈದ್ಯ ಶರೀಫ್ ಫರಾಲ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.
ಪಾರಂಪರಿಕ ವೈದ್ಯ ಪದ್ಧತಿ, ಔಷಧೀಯ ಸಸ್ಯಗಳು ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳ ಮಹತ್ವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ನಡೆದ ಕಾರ್ಯಕ್ರಮ ಗಮನ ಸೆಳೆಯಿತು.

