ಮಂಗಳೂರು: ಅರ್ಹ ಹಾಗೂ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬರಿಗೆ ವೈದ್ಯಕೀಯ ಸ್ನಾತಕೋತ್ತರ ಪದವಿ (ಎಂ.ಡಿ) ಶಿಕ್ಷಣ ಪಡೆಯಲು ತುಂಬೆ ಗ್ರೂಪ್ನ ಸಂಸ್ಥಾಪಕ ಅಧ್ಯಕ್ಷ ಡಾ. ತುಂಬೆ ಮೊಯ್ದಿನ್ ಅವರು ₹1.5 ಕೋಟಿ ಮೊತ್ತದ ಸ್ಕಾಲರ್ಶಿಪ್ ಘೋಷಿಸಿದ್ದಾರೆ.

ಮಂಗಳೂರಿನ ಪುರಭವನದಲ್ಲಿ ನಡೆದ ಬಿಸಿಎಫ್ ವಿದ್ಯಾರ್ಥಿವೇತನ ವಿತರಣೆ, ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಣೆ ಹಾಗೂ ಗ್ಲೋಬಲ್ ಲೀಡರ್ಶಿಪ್ ಅವಾರ್ಡ್–2026 ಪ್ರದಾನ ಸಮಾರಂಭದಲ್ಲಿ ವಿದ್ಯಾರ್ಥಿನಿಗೆ ‘ತುಂಬೆ ಇಂಟರ್ನ್ಯಾಷನಲ್ ಪಾಥ್ವೇ ಪ್ರೋಗ್ರಾಂ’ನ ಸ್ಕಾಲರ್ಶಿಪ್ ಮಂಜೂರಾತಿ ಪತ್ರ ಹಸ್ತಾಂತರಿಸಲಾಯಿತು.
ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಉದ್ಘಾಟಿಸಿದರು. ಇದೇ ವೇಳೆ ‘ಗ್ಲೋಬಲ್ ಲೀಡರ್ಶಿಪ್ ಅವಾರ್ಡ್ ಫಾರ್ ಕ್ವಾಲಿಟಿ ಆ್ಯಂಡ್ ಇನ್ನೋವೇಶನ್–2026’ ಅನ್ನು ಡಾ. ತುಂಬೆ ಮೊಯ್ದಿನ್ ಅವರಿಗೆ ಪ್ರದಾನಿಸಲಾಯಿತು.

ಬ್ಯಾರೀಸ್ ಕಲ್ಚರಲ್ ಫೋರಂ (ಬಿಸಿಎಫ್) ದುಬೈ ಹಾಗೂ ಬಿಸಿಎಫ್ ಟ್ರಸ್ಟ್ ಮಂಗಳೂರು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಆರ್ಥಿಕವಾಗಿ ದುರ್ಬಲ ವರ್ಗದ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸುವುದರ ಜೊತೆಗೆ ಉದ್ಯಮಶೀಲತಾ ವಿಚಾರ ಸಂಕಿರಣವೂ ನಡೆಯಿತು.

‘ತುಂಬೆ ಇಂಟರ್ನ್ಯಾಷನಲ್ ಪಾಥ್ವೇ ಪ್ರೋಗ್ರಾಂ’ ಮೂಲಕ ಆಯ್ಕೆಯಾಗುವ ವಿದ್ಯಾರ್ಥಿಗಳು ಮೊದಲ ಮೂರು ವರ್ಷ ಅಜ್ಮಾನ್ನ ಗಲ್ಫ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಹಾಗೂ ಮುಂದಿನ ಮೂರು ವರ್ಷ ಉಜ್ಬೇಕಿಸ್ತಾನದ ಸಹಭಾಗಿತ್ವದ ವೈದ್ಯಕೀಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡಿ ಎಂ.ಡಿ ಪದವಿ ಪಡೆಯಲಿದ್ದಾರೆ.
ಆರ್ಥಿಕ ಸಂಕಷ್ಟದಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣದ ಅವಕಾಶ ಕಲ್ಪಿಸುವ ಉದ್ದೇಶದಿಂದ ಈ ಸ್ಕಾಲರ್ಶಿಪ್ ಯೋಜನೆಯನ್ನು ತುಂಬೆ ಗ್ರೂಪ್ ಆರಂಭಿಸಿದೆ.

