ಆ.23ರಂದು ‘ಗುರುಚಿತ್ತಾರ–2026’ ಚಿತ್ರಕಲಾ ಸ್ಪರ್ಧೆ

ಮಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜನ್ಮಜಯಂತಿ ಅಂಗವಾಗಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಹಾಗೂ ನಾರಾಯಣ ಗುರು ವಿದ್ಯಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ ‘ಗುರುಚಿತ್ತಾರ–2026’ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆ.23ರಂದು ಬೆಳಗ್ಗೆ 9.30ಕ್ಕೆ ಮಂಗಳೂರಿನ ಕುದ್ರೋಳಿ ನಾರಾಯಣ ಗುರು ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಯೂನಿಯನ್ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1912ರಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಉಪಸ್ಥಿತಿ, ಮಾರ್ಗದರ್ಶನ ಹಾಗೂ ಆಶೀರ್ವಾದದೊಂದಿಗೆ ಶಿಕ್ಷಣ ಮತ್ತು ಸಂಘಟನೆಯ ಉದ್ದೇಶದಿಂದ ಅಖಿಲ ಭಾರತ ಬಿಲ್ಲವರ ಯೂನಿಯನ್ ಸ್ಥಾಪನೆಯಾಗಿದೆ. ಕಳೆದ 114 ವರ್ಷಗಳಿಂದ ಬಿಲ್ಲವ ಸಮಾಜವನ್ನು ಸಂಘಟಿಸುವ ಕಾರ್ಯವನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

ಮೂರು ವಿಭಾಗಗಳಲ್ಲಿ ಸ್ಪರ್ಧೆ: 5ರಿಂದ 7ನೇ ತರಗತಿಯ ವಿದ್ಯಾರ್ಥಿಗಳಿಗೆ ಸಬ್‌ಜೂನಿಯರ್, 8ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಜೂನಿಯರ್ ಹಾಗೂ ಪಿಯುಸಿ ಮತ್ತು ಪದವಿ ವಿದ್ಯಾರ್ಥಿಗಳಿಗೆ ಕಾಲೇಜು ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸಬ್‌ಜೂನಿಯರ್ ವಿಭಾಗದಲ್ಲಿ ನಾರಾಯಣ ಗುರುಗಳ ಭಾವಚಿತ್ರವನ್ನು ನೋಡಿ ಪೆನ್ಸಿಲ್‌ನಲ್ಲಿ ಚಿತ್ರ ಬಿಡಿಸಬೇಕು. ಜೂನಿಯರ್ ವಿಭಾಗದಲ್ಲಿ ಬಣ್ಣಗಳಲ್ಲಿ ಭಾವಚಿತ್ರ ಬಿಡಿಸಬೇಕು. ಕಾಲೇಜು ವಿಭಾಗದಲ್ಲಿ ನಾರಾಯಣ ಗುರುಗಳ ಜೀವನದ ಒಂದು ಸನ್ನಿವೇಶವನ್ನು ಬಣ್ಣಗಳಲ್ಲಿ ಚಿತ್ರಿಸಬೇಕು.

ಸ್ಪರ್ಧೆಯ ನೋಂದಣಿ ಸ್ಥಳದಲ್ಲೇ ನಡೆಯಲಿದ್ದು, ಎಲ್ಲ ಸಮಾಜದ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವಿದೆ. ಸ್ಪರ್ಧಾಳುಗಳು ಶಾಲಾ ಗುರುತಿನ ಚೀಟಿ ಅಥವಾ ಶಾಲೆಯ ದೃಢೀಕರಣ ಪತ್ರ ತರಬೇಕು. ಎರಡು ಗಂಟೆಗಳ ಕಾಲ ಸ್ಪರ್ಧೆಗೆ ಅವಕಾಶವಿದ್ದು, ಡ್ರಾಯಿಂಗ್ ಶೀಟ್‌ನ್ನು ಆಯೋಜಕರು ನೀಡಲಿದ್ದಾರೆ. ಚಿತ್ರಕಲೆಗೆ ಅಗತ್ಯವಾದ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು.

ಪ್ರತಿ ವಿಭಾಗದಲ್ಲಿ ಪ್ರಥಮ ಬಹುಮಾನ ರೂ.5,000, ದ್ವಿತೀಯ ರೂ.3,000, ತೃತೀಯ ರೂ.2,000 ಹಾಗೂ ಚತುರ್ಥ ರೂ.1,000 ನಗದು ಬಹುಮಾನ, ಸ್ಮರಣಿಕೆ ನೀಡಲಾಗುವುದು. ಪ್ರತಿ ವಿಭಾಗದಲ್ಲಿ ಐದು ಸಮಾಧಾನಕರ ಬಹುಮಾನಗಳಿದ್ದು, ಭಾಗವಹಿಸುವ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು.

ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಮುಖರಾದ ಲೋಕನಾಥ ಅಮೀನ್, ಜೀವನ್ ಕುಮಾರ್ ತೊಕ್ಕೊಟ್ಟು, ಎ.ಜಿ. ಶೇಖರ್ ಹಾಗೂ ಸುಮಲತಾ ಉಪಸ್ಥಿತರಿದ್ದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!