ಮಂಜೇಶ್ವರ : ಮಂಜೇಶ್ವರ ಗ್ರಾಮ ಪಂಚಾಯತ್ ಹಾಗೂ ಕೃಷಿ ಭವನದ ಜಂಟಿ ಆಶ್ರಯದಲ್ಲಿ ಸಿಂಹ ಮಾಸ 1ರ ಹೊಸ ವರ್ಷದ ಆರಂಭದ ದಿನದಂದು ಮಂಜೇಶ್ವರ ಬ್ಲಾಕ್ ಪಂಚಾಯತ್ ಹಾಲ್ನಲ್ಲಿ ‘ರೈತರ ದಿನಾಚರಣೆ’ಯು ಅತ್ಯಂತ ಸಂಭ್ರಮ ಮತ್ತು ಸಡಗರದಿಂದ ಜರುಗಿತು.


ಹವಾಮಾನ ಬದಲಾವಣೆ ಹಾಗೂ ವಿವಿಧ ಬಿಕ್ಕಟ್ಟುಗಳ ನಡುವೆಯೂ ಮಣ್ಣಿನಲ್ಲಿ ಚಿನ್ನ ಬೆಳೆದು ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿರುವ ರೈತ ಬಂಧುಗಳನ್ನು ಗೌರವಿಸುವ ಹಾಗೂ ಕೃಷಿ ಪರಂಪರೆಯ ಬಗ್ಗೆ ಹೆಮ್ಮೆಪಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಗೌರವಾನ್ವಿತ ಶಾಸಕರಾದ ಶ್ರೀ ಎ.ಕೆ.ಎಂ. ಅಶ್ರಫ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಬಶೀರ್ ಕನಿಲ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.


ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷರಾದ ಶ್ರೀ ಯು.ಕೆ. ಸೈಫುಲ್ಲಾ ತಂಬಳ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕೃಷಿಕರನ್ನು ಅಭಿನಂದಿಸಿದರು.
ಈ ಸಂದರ್ಭ ಬ್ಲಾಕ್ ಪಂಚಾಯತ್ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಮೊಹಮ್ಮದ್ ಹನೀಫ್ , ಪಂಚಾಯತ್ ಸದಸ್ಯ ಮುಕ್ತಾರ್ ಎ, ಉಪಾಧ್ಯಕ್ಷೆ ಫಾತಿಮತ್ ಝಹುರಾ, ಸೇರಿದಂತೆ ಹಲವರು ಉಪಸ್ಥಿತರಿದ್ದರು
ಬಳಿಕ ವೇದಿಕೆಯಲ್ಲಿ ಕೃಷಿ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ಹಾಗೂ ವಿವಿಧ ವಿಭಾಗಗಳಲ್ಲಿ ಶ್ರಮಿಸಿರುವ ಸಾಧಕರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

