ಕಾಸರಗೋಡು/ಇಡುಕ್ಕಿ : ಇಡುಕ್ಕಿ ಜಿಲ್ಲೆಯ ತೊಡುಪುಳದಲ್ಲಿ ತಾಯಿಯೊಬ್ಬರನ್ನು ಪುತ್ರನೇ ತಲೆಗೆ ಹೊಡೆದು ಹತ್ಯೆ ಮಾಡಿದ್ದಾನೆ.

ಇಡವೆಟ್ಟಿ ಮೈಲಾಟುಂಪಾರ ವಳಪ್ ನಿವಾಸಿ ರೈಚಲ್ ಜೋಸೆಫ್ (ಹೋಂ ನರ್ಸ್) ಕೊಲೆಗೀಡಾದ ದುರ್ದೈವಿ. ಈ ಕೃತ್ಯ ಎವೆಸಗಿದ ಪುತ್ರ ಲಿಜೊನನ್ನು ಪೊಲೀಸರು ಬಂಧಿಸಿದ್ದಾರೆ.
ಎರ್ನಾಕುಳಂನಲ್ಲಿ ಕೆಲಸ ಮಾಡುತ್ತಿದ್ದ ರೈಚಲ್ ಜೋಸೆಫ್, ಇತ್ತೀಚೆಗೆ ತೊಡುಪುಳಕ್ಕೆ ಬಂದಿದ್ದರು. ಧ್ಯಾನಕೂಟಕ್ಕೆ ತೆರಳುವ ಮುನ್ನ ಪುತ್ರ ಲಿಜೊನನ್ನು ಭೇಟಿಯಾಗಲು ಆತನ ಮನೆಗೆ ತೆರಳಿದ್ದರು.

ಈ ವೇಳೆ ತಾಯಿ-ಮಗನ ನಡುವೆ ತೀವ್ರ ವಾಗ್ವಾದ ನಡೆದಿದೆ. ಮಾತಿಗೆ ಮಾತು ಬೆಳೆದಾಗ ಆಕ್ರೋಶಗೊಂಡ ಪುತ್ರ, ಮರದ ರೀಪ್ನಿಂದ ತಾಯಿಯ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾನೆ. ಗಾಯಗೊಂಡು ತಾಯಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ನೆರೆಮನೆಯವರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿ ಲಿಜೊನನ್ನು ತೊಡುಪುಳ ಸಮೀಪ ವಶಕ್ಕೆ ಪಡೆದಿದ್ದಾರೆ.
ಈ ಭೀಕರ ಕೃತ್ಯಕ್ಕೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಆರೋಪಿಗೆ ಮಾನಸಿಕ ಅಸ್ಥಿರತೆ ಇರಬಹುದು ಎಂದು ಶಂಕಿಸಲಾಗಿದೆ.

