ಕಾಂಗ್ರೆಸ್ ಕಾರ್ಯಕಾರಿ ಸಮಿತಿ (CWC) ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭಾವುಕರಾಗಿ ಮಾತನಾಡಿದ್ದು, ಉತ್ತರಾಖಂಡದಲ್ಲಿ ತಮ್ಮ ವಿರುದ್ಧ ನಡೆದ ಜಾತಿ ನಿಂದನೆಯ ಘಟನೆಗೆ ಕಾರ್ಯಕಾರಿ ಸಮಿತಿಯ ಎಲ್ಲರೂ ಬೆಂಬಲ ವ್ಯಕ್ತಪಡಿಸದಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲ್ದ್ವಾನಿಗೆ ಭೇಟಿ ನೀಡಿದ ಬಳಿಕ ತಮ್ಮ ವಿರುದ್ಧ ನಡೆದ ‘ಶುದ್ಧೀಕರಣ’ ಕಾರ್ಯಕ್ರಮವನ್ನು ಖಂಡಿಸಿ, ಕಾರ್ಯಕಾರಿ ಸಮಿತಿಯ ಹಲವು ಸದಸ್ಯರು ಬಹಿರಂಗವಾಗಿ ಬೆಂಬಲ ವ್ಯಕ್ತಪಡಿಸದಿರುವುದು ತಮಗೆ ನೋವುಂಟು ಮಾಡಿದೆ ಎಂದು ಖರ್ಗೆ ಹೇಳಿದ್ದಾರೆ. ಮಾಧ್ಯಮಗಳಲ್ಲಿ ನಿರಂತರವಾಗಿ ಕಾಣಿಸಿಕೊಳ್ಳುವ ಕೆಲವು ಪ್ರಭಾವಿ ನಾಯಕರು ಕೂಡ ಈ ಘಟನೆ ಕುರಿತು ಬಹಿರಂಗವಾಗಿ ಯಾವುದೇ ಹೇಳಿಕೆ ನೀಡದಿರುವುದು ಬೇಸರ ತಂದಿದೆ ಎಂದು ಅವರು ತಿಳಿಸಿದ್ದಾರೆ.

“ನಾನು ದಲಿತನಾಗಿರುವುದರಿಂದ ಯಾರಾದರೂ ನನ್ನನ್ನು ವಿಶೇಷವಾಗಿ ರಕ್ಷಿಸಬೇಕು ಎಂದು ನಾನು ನಿರೀಕ್ಷಿಸುವುದಿಲ್ಲ. ಆದರೆ ನನ್ನನ್ನು ಅಪಮಾನಿಸುವ ಉದ್ದೇಶದಿಂದ ನಡೆದಿರುವಂತೆ ಭಾಸವಾದ ಈ ‘ಶುದ್ಧೀಕರಣ’ ಕಾರ್ಯಕ್ರಮವನ್ನು ಖಂಡಿಸುವುದು ಅಗತ್ಯವಾಗಿತ್ತು,” ಎಂದು ಖರ್ಗೆ ಕಾರ್ಯಕಾರಿ ಸಮಿತಿಯಲ್ಲಿ ಹೇಳಿದ್ದಾರೆ.
ಹಲ್ದ್ವಾನಿಯಲ್ಲಿ ನಡೆದ ಕಾಂಗ್ರೆಸ್ ರ್ಯಾಲಿಯಲ್ಲಿ ಭಾಷಣ ಮಾಡಿ ಖರ್ಗೆ ತೆರಳಿದ ಬಳಿಕ, ಅವರು ಬಳಸಿದ್ದ ವೇದಿಕೆಯನ್ನು ಬಿಜೆಪಿ ಕಾರ್ಯಕರ್ತರು ‘ಶುದ್ಧೀಕರಿಸಿದ್ದಾರೆ’ ಎಂದು ಖರ್ಗೆ ಈ ಹಿಂದೆ ರಾಜ್ಯಸಭೆಯಲ್ಲಿ ಆರೋಪಿಸಿದ್ದರು. ತಾವು ದಲಿತರಾಗಿರುವ ಕಾರಣದಿಂದಲೇ ಈ ರೀತಿ ಮಾಡಲಾಗಿದೆ ಮತ್ತು ಇದರಿಂದ ತಾವು ಅಪಮಾನಿತರಾಗಿದ್ದೇನೆ ಎಂದು ಅವರು ಹೇಳಿದ್ದರು.

ಆದರೆ, ವೇದಿಕೆಯನ್ನು ಶುದ್ಧೀಕರಿಸಿದ್ದು ‘ಶ್ರೀರಾಮ ಸೇನೆ’ ಎಂಬ ಸಂಘಟನೆ. ಈ ಘಟನೆಗೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸ್ಪಷ್ಟಪಡಿಸಿದ್ದರು.
ಈ ನಡುವೆ, ಹಲ್ದ್ವಾನಿಯಲ್ಲಿ ನಡೆದ ಶುದ್ಧೀಕರಣ ಕಾರ್ಯಕ್ರಮವನ್ನು ಕಾಂಗ್ರೆಸ್ ಈಗಾಗಲೇ ಖಂಡಿಸಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ತಿಳಿಸಿದ್ದಾರೆ.

