ಮಂಜೇಶ್ವರ: ಇಸ್ಲಾಂ ಧರ್ಮದ ಅಂತಿಮ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮದಿನವಾದ ‘ಈದ್ ಮಿಲಾದ್’ ಹಬ್ಬವನ್ನು ಪೊಸೋಟು ಜಮಾಅತ್ ವತಿಯಿಂದ ಅತ್ಯಂತ ಸಡಗರ, ಸಂಭ್ರಮ ಹಾಗೂ ಧಾರ್ಮಿಕ ಶ್ರದ್ಧಾಭಕ್ತಿಯಿಂದ ಆಚರಿಸಲಾಯಿತು.
ಹಬ್ಬದ ಅಂಗವಾಗಿ ಪೊಸೋಟು ಜಮಾಅತ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೃಹತ್ ಧಾರ್ಮಿಕ ಮೆರವಣಿಗೆಯು ಕಣ್ಮನ ಸೆಳೆಯಿತು. ಮಸೀದಿ ಅಧ್ಯಕ್ಷರಾದ ಆರ್.ಕೆ. ಬಾವ ಹಾಜಿ ಮೆರವಣಿಗೆಗೆ ಚಾಲನೆ ನೀಡಿದರು.

ಜಮಾಅತ್ ಕಾರ್ಯದರ್ಶಿ ಉಸ್ಮಾನ್ ಹಾಜಿ, ಕೋಶಾಧಿಕಾರಿ ಕೆ.ಟಿ. ಅಬ್ದುಲ್ಲ ಹಾಜಿ, ಮುದರ್ರಿಸ್ ಸಯ್ಯದ್ ಹರಿಸ್ ತಂಘಲ್, ಸದರ್ ಮುಅಲ್ಲಿಮ್ ಅಬ್ದುಲ್ ಲತೀಫ್ ನಿಜಾಮಿ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರಾದ ಇಬ್ರಾಹಿಂ ಬುಟ್ಟೋ, ಮೊಹಮ್ಮದ್ ರಫೀಕ್ ಮತ್ತು ಟಿ.ಎಸ್. ಮಹಮೂದ್ ಸೇರಿದಂತೆ ಪ್ರಮುಖ ಗಣ್ಯರು ಮೆರವಣಿಗೆಯ ನೇತೃತ್ವ ವಹಿಸಿದ್ದರು.

ಪೊಸೋಟು ಮಂಬಉಲ್ ಉಲೂಮ್ ಕೇಂದ್ರ ಮದ್ರಸ ಹಾಗೂ ಅದರ ಅಧೀನದ ವಿವಿಧ ಮದ್ರಸಾಗಳ ನೂರಾರು ವಿದ್ಯಾರ್ಥಿಗಳು ಮತ್ತು ಯುವಕರು ಸಾಂಪ್ರದಾಯಿಕ ಉಡುಪಿನಲ್ಲಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು.

ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಸಾರ್ವಜನಿಕರಿಗೆ ಸಿಹಿ ತಿನಿಸು ಹಾಗೂ ಮಧುರ ಪಾನೀಯಗಳನ್ನು ವಿತರಿಸುವ ಮೂಲಕ ಪರಸ್ಪರ ಪ್ರೀತಿ-ವಿಶ್ವಾಸ ಹಾಗೂ ಸೌಹಾರ್ದತೆಯನ್ನು ಹಂಚಿಕೊಳ್ಳಲಾಯಿತು.
ಶಾಂತಿ, ಕರುಣೆ ಮತ್ತು ಸೌಹಾರ್ದತೆಯ ಸಂದೇಶ ಸಾರಿದ ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ದಿವ್ಯ ಆದರ್ಶಗಳನ್ನು ಜನರಿಗೆ ನೆನಪಿಸುವ ಮೂಲಕ ಈ ಬಾರಿಯ ಪೊಸೋಟು ಜಮಾಅತ್ ವ್ಯಾಪ್ತಿಯ ಈದ್ ಮಿಲಾದ್ ಆಚರಣೆಯು ಅತ್ಯಂತ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.


