ಮಂಜೇಶ್ವರ: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆ ಆರಿಕ್ಕಾಡಿ ಕಡವತ್ ನಲ್ಲಿ ಟಾಲ್ ಪ್ಲಾಝಾ ಸ್ಥಾಪಿಸಲು ನಾಗರಿಕ ಹಿತಾಸಕ್ತಿಯ ಕ್ರಿಯಾ ಸಮಿತಿ ವಿರೋಧ ಒಡ್ಡಿ, ಕಾಮಗಾರಿ ತಡೆಯುತ್ತಿರುವುದರಿಂದ ಕಾರ್ಮಿಕರಿಗೆ ಸಂರಕ್ಷಣೆ ನೀಡಿ ಕಾಮಗಾರಿಗೆ ಭದ್ರತೆ ಒದಗಿಸಬೇಕೆಂದು ಗುತ್ತಿಗೆದಿರರಾದ
ULPC ಸೊಸೈಟಿ ಪ್ರತಿನಿಧಿಗಳು ಪೋಲೀಸ್ ಮೊರೆ ಹೊರೆ ಹೋಗಿದ್ದಾರೆ.
ಟಾಲ್ ಪ್ಲಾಝಾ ನಿರ್ಮಾಣದ ತಡೆಯಾಜ್ಞೆಯನ್ನು ಹೈಕೋರ್ಟು ಮಧ್ಯಂತರ ಆದೇಶದಲ್ಲಿ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಮುಂದಿನ 60ದಿನದೊಳಗೆ ಟೋಲ್ ಪ್ಲಾಝಾ ನಿರ್ಮಿಸಿಕೊಡುವಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಗುತ್ತಿಗೆದಾರರಿಗೆ ಆದೇಶಿಸಿದೆ.
ಈ ಹಿನ್ನೆಲೆಯಲ್ಲಿ ಅವರು ಕಾಮಗಾರಿ ಪುನರಾರಂಭಕ್ಕೆ ಭದ್ರತೆ ಕೋರಿದ್ದಾರೆ. ಈಗಾಗಲೇ ಆರಂಭಗೊಂಡ ಕಾಮಗಾರಿಯನ್ನು ಸ್ಥಳೀಯರು ತಡೆದಿರುವುದರಿಂದ ಕಾಮಗಾರಿ ಮುಂದುವರಿಸಲು ಸ್ಥಳದಲ್ಲಿ ಪೋಲೀಸ್ ರಕ್ಷಣೆ ಅಗತ್ಯ ಎಂದು ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಕುಂಬಳೆ ಟೋಲ್ ಪ್ಲಾಝಾ ಕಾಮಗಾರಿಯನ್ನು ಪ್ರಶ್ನಿಸಿ ತಡೆಯಬೇಕೆಂದು ಒತ್ತಾಯಿಸಿ ಹೈಕೋರ್ಟಿಗೆ ಸಲ್ಲಿಸಿದ ದೂರಿನಂತೆ ಕಾಮಗಾರಿಗೆ ಕೋರ್ಟು ತಡೆಯಾಜ್ಞೆ ವಿಧಿಸಿತ್ತು. ಈ ತೀರ್ಪನ್ನು ಹೈಕೋರ್ಟಿನ ಸಿಂಗಲ್ ಬೆಂಚ್ ಮಧ್ಯಂತರ ಆದೇಶದಲ್ಲಿ ರದ್ದುಗೊಳಿಸಿದೆ.
ಇದರಂತೆ ಕಾಮಗಾರಿ ಪುನರಾರಂಭಗೊಂಡಿತ್ತು.
ಈ ಸಂದರ್ಭ ಟೋಲ್ ಗೇಟ್ ವಿರೋಧಿ ಕ್ರಿಯಾ ಸಮಿತಿ ಕಾರ್ಯಕರ್ತರು ತೆರಳಿ ಕಾಮಗಾರಿಗೆ ಅಡ್ಡಿಪಡಿಸಿ, ಪ್ರತಿಭಟನೆ ನಡೆಸಿ ಕಾರ್ಮಿಕರನ್ನು ಹಿಂತೆರಳಿಸಿದ್ದರು. ಆ ಬಳಿಕ ಮತ್ತೆ ಕಾಮಗಾರಿ ಆರಂಭಗೊಂಡಾಗ ಕ್ರಿಯಾ ಸಮಿತಿ ನೇತೃತ್ವದಲ್ಲಿ ಕಾಮಗಾರಿ ತಡೆಯಲಾಯಿತು.ಈ ಸಂದರ್ಭಪೋಲೀಸರು ತಲುಪಿ ಕಾಮಗಾರಿ ತಡೆದ ಕ್ರಿಯಾ ಸಮಿತಿ ಕಾರ್ಯಕರ್ತರಾದ, ಸ್ಥಳೀಯ ರಾಜಕೀಯ ಮುಖಂಡರುಗಳಾದ ಅಶ್ರಫ್ ಕಾರ್ಲೆ, ನಾಸರ್ ಮೊಗ್ರಾಲ್, ಸಿ.ಎ ಸುಬೈರ್, ಎ.ಕೆ.ಆರಿಫ್, ಲಕ್ಷ್ಮಣ ಪ್ರಭು, ಅನ್ವರ್ ಆರಿಕ್ಕಾಡಿ ಅವರನ್ನು ವಶಕ್ಕೆ ತೆಗೆದುಕೇಸು ದಾಖಲಿಸಿ ಬಳಿಕ ಬಿಟ್ಟಿದ್ದಾರೆ.