ಮಂಗಳೂರು : ಪ್ರಕೃತಿ- ಪಶು ಸಂರಕ್ಷಣೆ, ಅಳಿವಿನಂಚಿನ ದೇಸಿ ಗೋವು ಸಂತತಿ ರಕ್ಷಣೆ ಹಾಗೂ ಗೋವಿನ ಪಾವಿತ್ರೃತೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಆರಂಭಗೊಂಡ ಕೆಂಜಾರಿನ ಕಪಿಲಾ ಪಾರ್ಕ್ ಗೋ ಶಾಲೆಯಲ್ಲಿ ಅ.22ರಂದು ಬೆಳಗ್ಗೆ 6ರಿಂದ 11.30ರ ವರೆಗೆ 108 ಕಪಿಲಾ ಗೋವುಗಳಿಗೆ ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ ನಡೆಯಲಿದೆ.
ಕಪಿಲಾ ಗೋ ಶಾಲೆಯ ಮುಖ್ಯಸ್ಥರಾದ ಪ್ರಕಾಶ್ ಶೆಟ್ಟಿ ಈ ವಿಷಯ ತಿಳಿಸಿದರು ಮತ್ತು ದೀಪಾವಳಿಯ ವಿಶೇಷ ಸಂದರ್ಭ ಸಾರ್ವಜನಿಕರಿಗೆ ಗೋವಿನ ಅನುಗ್ರಹ ಪ್ರಾಪ್ತಿಗಾಗಿ ಕಪಿಲಾ ಗೋ ಶಾಲೆಯಲ್ಲಿ ನಡೆಯಲಿರುವ 108 ಕಪಿಲಾ ಗೋಪುಜಾ ಕಾರ್ಯಕ್ರಮದ ಆಮಂತ್ರಣಪತ್ರಿಕೆಯನ್ನು ಬಿಡುಗಡೆಗೊಳಿಸಿದರು. ಗೋವಿನ ಸಂತತಿ ರಕ್ಷಣೆಗಾಗಿ 2012ರಲ್ಲಿ ಸ್ಥಾಪಿಸಲಾದ, 2ಗೋವುಗಳಿಂದ ಆರಂಭವಾದ ಈ ಕಪಿಲಾ ಗೋ ಶಾಲೆ ಇಂದು 600ಕ್ಕೂ ಅಧಿಕ ಗೋವುಗಳನ್ನುಹೊಂದಿದೆ.
ಕಪಿಲಾ ಗೋ ಶಾಲೆಯನ್ನು ಅಳಿವಿನಂಚಿನ ದೇಸಿ ಗೋವು ಸಂತತಿ ರಕ್ಷಣೆ ಉದ್ದೇಶದಿಂದ ಮಾತ್ರ ಮುನ್ನಡೆಸಲಾಗುತ್ತಿದ್ದು, ಯಾವುದೇ ಗೋವು ಸಂಬಂದಿತ ಉದ್ಯಮ ಇಲ್ಲಿ ನಡೆಸಲಾಗುತ್ತಿಲ್ಲ. ದಿನದಿಂದ ದಿನಲ್ಲಿ ಇಲ್ಲಿ ಗೋವುಗಳ ಸಂಖ್ಯೆ ವೃದ್ದಿಯಾಗುತ್ತಿದೆ. ಇಲ್ಲಿನ ಗೋವುಗಳ ಹಾಲನ್ನು ಮಾರಲಾಗುತ್ತಿಲ್ಲ, ಬದಲಾಗಿ ಕರುಗಳಿಗೆ ಉಣಿಸಲಾಗುತ್ತಿರುವುದು ಇಲ್ಲಿನ ವಿಶೇಷ ಎಂದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ಸುರೇಶ್ ಶೆಟ್ಟಿ ಮಾತನಾಡಿ, ಕಪಿಲಾ ಗೋ ಶಾಲೆಯಲ್ಲಿ ದಿನದಿಂದ ದಿನಕ್ಕೆ ಗೋವುಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಗೋವುಗಳಿಗೆ ನಿರಾಳವಾಗಿ ನಡೆದಾಡಲು ಸ್ಥಳದ ಕೊರತೆ ಇದೆ. ಸುಮಾರು 50ಸಾವಿರ ಚ.ಅಡಿ ವಿಸ್ತೀರ್ಣದ ಗೋ ಶಾಲೆಯನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈಗಾಗಲೇ ಸುಮಾರು 4 ಕೋ.ರೂ ವೆಚ್ಚದ ಯೋಜನೆಯ ನೀಲನಕಾಶೆ ಸಿದ್ದಪಡಿಸಲಾಗಿದೆ. ದಾನಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ರಾಜ್ಯದಲ್ಲೇ ಸುಸಜ್ಜಿತ ಗೋ ಶಾಲೆ ನಿರ್ಮಸುವ ಯೋಜನೆ ಹಮ್ಮಿಕೊಳ್ಳಲಾಗಿದೆ ಎಂದರು.
ಸಾರ್ವಜನಿಕ ಗೋಪೂಜಾ ಕಾರ್ಯಕ್ರಮ ಜತೆಗೆ ಶ್ರೀ ಅಯ್ಯಪ್ಪ ಭಕ್ತವೃಂದ ಆಕಾಶಭವನ ಹಾಗೂ ಶಿವನಗರ ಭಜಕ ವೃಂದ ಶಿವನಗರ ಕಾವೂರು ತಂಡಗಳಿಂದ ಭಜನಾ ಸಂಕೀರ್ತನಾ ಸೇವೆ ನಡೆಯಲಿದೆ ಎಂದರು. ಜೀರ್ಣೋದ್ದಾರ ಸಮಿತಿ ಸಂಚಾಲಕ ರವಿ ಕಾವೂರ್, ಪ್ರಮುಖರಾದ ಸಂತೋಷ್ ಕಾವೂರು, ಯತೀಶ್ ಕುಮಾರ್ ಇದ್ದರು.