ಹಿಂದೂಪರ ಸಂಘಟನೆಗಳ ಒತ್ತಡದಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗ ಏರ್ಪಡಿಸಿದ್ದ ದಫ್ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಡಿ. 25 ಮತ್ತು 26 ರಂದು ಸಮಾಜ ಸೇವಾ ಸಂಘ (ರಿ) ಇದರ ವತಿಯಿಂದ ಕೆವಿಜಿ ಸುಳ್ಯ ಹಬ್ಬವನ್ನು ಆಯೋಜಿಸಲಾಗಿತ್ತು. ಕೋಮು ಸೌಹಾರ್ದತೆಯ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸಹಕಾರದಲ್ಲಿ ಸಾಂಸ್ಕ್ರತಿಕ ಕಾರ್ಯಕ್ರಮ ‘ದಫ್ ಪ್ರದರ್ಶನ’ವನ್ನು ಸುಳ್ಯ ಚೆನ್ನಕೇಶವ ದೇವಸ್ಥಾನದ ಮುಂಭಾಗ ಆಯೋಜಿಸಲಾಗಿತ್ತು.
ದೇವಸ್ಥಾನದ ಮುಂಭಾಗ ದಫ್ ಪ್ರದರ್ಶನವನ್ನು ವಿಎಚ್ ಪಿ ಬಜರಂಗದಳ ಹಾಗೂ ಹಿಂದೂಪರ ಸಂಘಟನೆಗಳು ವಿರೋಧಿಸಿದ್ದವು. ಅಲ್ಲದೇ ದೇವಸ್ಥಾನದ ಮುಂಭಾಗ ದಫ್ ಪ್ರದರ್ಶನ ಮಾಡಿದ್ರೆ ಮಸೀದಿ ಮುಂದೆ ಹನುಮಾನ್ ಚಾಲೀಸ್ ಪಠಣ ಮಾಡುವುದಾಗಿ ಹಿಂದೂಪರ ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ದೇವಸ್ಥಾನದ ಮುಂದೆ ದಫ್ ಪ್ರದರ್ಶನಕ್ಕೆ ಅವಕಾಶ ನೀಡದಂತೆ ಸರಕಾರಕ್ಕೆ ಮಾಹಿತಿ ನೀಡಿದ್ದ ಗುಪ್ತಚರ ಇಲಾಖೆಯು ದಫ್ ಪ್ರದರ್ಶನಕ್ಕೆ ಅವಕಾಶ ನೀಡಿದ್ದಲ್ಲಿ ಕರಾವಳಿಯಲ್ಲಿ ವಿವಾದ ಗೊಂದಲ ಉಂಟಾಗುವ ಸಾಧ್ಯತೆ ಇದೆ ಎಂದು ಮಾಹಿತಿ ನೀಡಿತ್ತು ಎನ್ನಲಾಗಿದೆ. ಹೀಗಾಗಿ ಹಿಂದೂಪರ ಸಂಘಟನೆಗಳ ಒತ್ತಡಕ್ಕೆ ಮಣಿದ ಆಯೋಜಕರು ಕೊನೆಗೂ ದಫ್ ಪ್ರದರ್ಶನವನ್ನ ರದ್ದುಪಡಿಸಿದ್ದಾರೆ.