ಗಲ್ಫ್ ರಾಷ್ಟ್ರಗಳಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ಗಟ್ಟಿಯಾಗುತ್ತಿದೆ. ಶುಕ್ರವಾರ (ಏಪ್ರಿಲ್ 3) ಮುಂಜಾನೆ Iran ನಡೆಸಿದ ಕ್ಷಿಪಣಿ ದಾಳಿಯಿಂದ ಕುವೈತ್ನ ಪ್ರಮುಖ ವಿದ್ಯುತ್ ಮತ್ತು ನೀರು ಶುದ್ಧೀಕರಣ ಸ್ಥಾವರ ಭಾರೀ ಹಾನಿಗೊಳಗಾಗಿದೆ.
ಕುವೈತ್ ವಿದ್ಯುತ್ ಮತ್ತು ಜಲ ಸಚಿವಾಲಯದ ವಕ್ತಾರರು ಮಾಹಿತಿ ನೀಡುವಂತೆ, “ಇರಾನ್ನ ದಾಳಿಯಿಂದ ನಮ್ಮ ವಿದ್ಯುತ್ ಉತ್ಪಾದನಾ ಕೇಂದ್ರಕ್ಕೆ ದೊಡ್ಡ ಮಟ್ಟದ ಹಾನಿಯಾಗಿದೆ. ಆದಾಗ್ಯೂ, ಸದ್ಯಕ್ಕೆ ವಿದ್ಯುತ್ ಮತ್ತು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿಲ್ಲ” ಎಂದು ತಿಳಿಸಿದ್ದಾರೆ. ದಾಳಿ ನಡೆದ ಪ್ರದೇಶದಲ್ಲಿ ಯುದ್ಧ ವಿಮಾನಗಳ ಸಂಚಾರ ಹೆಚ್ಚಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.
ಇದರ ನಡುವೆಯೇ, Dubaiನಲ್ಲಿ ಭದ್ರತಾ ಕ್ರಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಯುದ್ಧ ಭೀತಿಯ ಹಿನ್ನೆಲೆಯಲ್ಲಿ ಕ್ರೈಸ್ತರ ಪವಿತ್ರ ಹಬ್ಬವಾದ Easter ಸಾಮೂಹಿಕ ಪ್ರಾರ್ಥನೆಗಳನ್ನು ರದ್ದುಗೊಳಿಸಲು ಆದೇಶ ನೀಡಲಾಗಿದೆ.
ದುಬೈನ Jebel Ali ಪ್ರದೇಶದಲ್ಲಿರುವ ಸೇಂಟ್ ಫ್ರಾನ್ಸಿಸ್ ಆಫ್ ಅಸಿಸಿ ಚರ್ಚ್ ಹಾಗೂ ಸೇಂಟ್ ಮೇರಿಸ್ ಚರ್ಚ್ಗಳಲ್ಲಿ ನಡೆಯಬೇಕಿದ್ದ ಈಸ್ಟರ್ ಪ್ರಾರ್ಥನೆಗಳನ್ನು ರದ್ದು ಮಾಡಲಾಗಿದೆ. “ಸಾರ್ವಜನಿಕರ ಸುರಕ್ಷತೆಯೇ ನಮಗೆ ಮೊದಲ ಆದ್ಯತೆ. ಯಾರೂ ಚರ್ಚ್ ಆವರಣಕ್ಕೆ ಬರಬಾರದು” ಎಂದು ಚರ್ಚ್ ಆಡಳಿತ ಮಂಡಳಿ ಮನವಿ ಮಾಡಿದೆ. ಭಕ್ತರ ಅನುಕೂಲಕ್ಕಾಗಿ Good Friday ಮತ್ತು ಈಸ್ಟರ್ ಪ್ರಾರ್ಥನೆಗಳನ್ನು ಯೂಟ್ಯೂಬ್ ಮೂಲಕ ನೇರಪ್ರಸಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.
ಫೆಬ್ರವರಿ 28ರಿಂದ ಆರಂಭವಾದ Israel-United States ಹಾಗೂ ಇರಾನ್ ನಡುವಿನ ಸಂಘರ್ಷ ಇದೀಗ ಜಾಗತಿಕ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತಿದೆ. ಈ ನಡುವೆ ಅಮೆರಿಕ ಅಧ್ಯಕ್ಷ Donald Trump “ಇರಾನ್ ವಿರುದ್ಧ ಇನ್ನೂ ಕಠಿಣ ಕ್ರಮಗಳು ಬಾಕಿ ಇವೆ” ಎಂದು ಎಚ್ಚರಿಕೆ ನೀಡಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉದ್ವಿಗ್ನಗೊಳಿಸಿದೆ.
ಕೈಗಾರಿಕಾ ಮತ್ತು ಪ್ರಮುಖ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ದಾಳಿಗಳು, ಗಲ್ಫ್ ರಾಷ್ಟ್ರಗಳಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಲ್ಲಿ ಆತಂಕವನ್ನುಂಟು ಮಾಡಿವೆ.