ಬೆಂಗಳೂರು, ಜುಲೈ 26: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್.ಡಿ.ಟಿ.ಯು) ಕರ್ನಾಟಕ ರಾಜ್ಯ ಸಮಿತಿಯ ವತಿಯಿಂದ “ಶ್ರಮಕ್ಕೆ ಗೌರವ – ಹಕ್ಕುಗಳಿಗೆ ಹೋರಾಟ” ಎಂಬ ಘೋಷವಾಕ್ಯದಡಿ ಆಗಸ್ಟ್ 1ರಿಂದ ಆಗಸ್ಟ್ 31ರವರೆಗೆ ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಸ್ಡಿಟಿಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಂ ಜಿ.ಕೆ. ಗುರುವಾಯನಕೆರೆ ತಿಳಿಸಿದ್ದಾರೆ.

ದೇಶದಲ್ಲಿ ಕಾರ್ಮಿಕರ ಹಕ್ಕುಗಳ ಮೇಲೆ ನಿರಂತರ ದಾಳಿ ನಡೆಯುತ್ತಿರುವ ಈ ಸಂದರ್ಭದಲ್ಲಿ, ಕಾರ್ಮಿಕರ ಏಕತೆ ಮತ್ತು ಸಂಘಟಿತ ಶಕ್ತಿಯೇ ಅವರ ಹಕ್ಕುಗಳನ್ನು ಸಂರಕ್ಷಿಸುವ ಪ್ರಮುಖ ಸಾಧನವಾಗಿದೆ. ಅಸಂಘಟಿತ ವಲಯ ಸೇರಿದಂತೆ ವಿವಿಧ ಕ್ಷೇತ್ರಗಳ ಕಾರ್ಮಿಕರನ್ನು ಸಂಘಟಿಸಿ, ಅವರ ಧ್ವನಿಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಈ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಇಂದು ದುಡಿಯುವ ವರ್ಗವು ಬೆಲೆ ಏರಿಕೆ, ಉದ್ಯೋಗ ಅಭದ್ರತೆ, ಗುತ್ತಿಗೆ ಪದ್ಧತಿಯ ವಿಸ್ತರಣೆ, ಕನಿಷ್ಠ ವೇತನದ ಉಲ್ಲಂಘನೆ, ಸಾಮಾಜಿಕ ಭದ್ರತೆಯ ಕೊರತೆ ಹಾಗೂ ಕಾರ್ಮಿಕ ಕಾನೂನುಗಳ ದುರ್ಬಲೀಕರಣದಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳ ವಿರುದ್ಧ ಪರಿಣಾಮಕಾರಿಯಾಗಿ ಹೋರಾಡಲು ಕಾರ್ಮಿಕರು ಬಲಿಷ್ಠ ಟ್ರೇಡ್ ಯೂನಿಯನ್ ಅಡಿಯಲ್ಲಿ ಸಂಘಟಿತರಾಗುವುದು ಅತ್ಯಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.

ರಾಜ್ಯದ ಎಲ್ಲಾ ಜಿಲ್ಲೆ, ತಾಲೂಕು ಹಾಗೂ ಸ್ಥಳೀಯ ಸಮಿತಿಗಳ ಮೂಲಕ ಕಾರ್ಖಾನೆಗಳು, ಕೈಗಾರಿಕೆಗಳು, ನಿರ್ಮಾಣ ಕ್ಷೇತ್ರ, ಸಾರಿಗೆ, ಹೋಟೆಲ್, ಅಂಗಡಿ-ಮುಂಗಟ್ಟು, ಗೃಹ ಕಾರ್ಮಿಕರು ಸೇರಿದಂತೆ ವಿವಿಧ ವಲಯಗಳ ಕಾರ್ಮಿಕರನ್ನು ನೇರವಾಗಿ ಭೇಟಿ ಮಾಡಿ ಸದಸ್ಯತ್ವ ಅಭಿಯಾನ ನಡೆಸಲಾಗುವುದು. ಈ ಅವಧಿಯಲ್ಲಿ ಜಾಗೃತಿ ಸಭೆಗಳು, ಸದಸ್ಯತ್ವ ಶಿಬಿರಗಳು ಹಾಗೂ ಕಾರ್ಮಿಕರೊಂದಿಗೆ ಸಂವಾದ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಕಾರ್ಮಿಕರ ಹಕ್ಕುಗಳ ರಕ್ಷಣೆ, ನ್ಯಾಯಯುತ ವೇತನ, ಸುರಕ್ಷಿತ ಉದ್ಯೋಗ, ಸಾಮಾಜಿಕ ಭದ್ರತೆ ಹಾಗೂ ಗೌರವಯುತ ಬದುಕಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ಪ್ರತಿಯೊಬ್ಬ ಕಾರ್ಮಿಕರೂ ಎಸ್ಡಿಟಿಯು ಸದಸ್ಯತ್ವ ಪಡೆದು ಚಳವಳಿಯ ಭಾಗವಾಗಬೇಕು. “ಶ್ರಮಕ್ಕೆ ಗೌರವ – ಹಕ್ಕುಗಳಿಗೆ ಹೋರಾಟ” ಎಂಬ ಸಂದೇಶವನ್ನು ಪ್ರತಿಯೊಬ್ಬ ದುಡಿಯುವ ಕೈಗೂ ತಲುಪಿಸುವ ಸಂಕಲ್ಪದೊಂದಿಗೆ ಈ ಅಭಿಯಾನ ನಡೆಯಲಿದ್ದು, ರಾಜ್ಯದ ಎಲ್ಲಾ ಕಾರ್ಮಿಕರು ಹಾಗೂ ಸಾರ್ವಜನಿಕರು ಇದನ್ನು ಯಶಸ್ವಿಗೊಳಿಸುವಂತೆ ಎಸ್.ಡಿ.ಟಿ.ಯು ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಸಲೀಂ ಜಿ.ಕೆ. ಗುರುವಾಯನಕೆರೆ ಅವರು ಮನವಿ ಮಾಡಿದ್ದಾರೆ.

