ಕರ್ಕಾಟಕ ಅಮಾವಾಸ್ಯೆ: ದಕ್ಷಿಣ ಕಾಶಿ ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರಿಂದ ಪಿತೃತರ್ಪಣ

ತೃಕ್ಕನ್ನಾಡು: ಕರ್ಕಾಟಕ ಅಮಾವಾಸ್ಯೆ ದಿನದ ಅಂಗವಾಗಿ ಪಿತೃಗಳಿಗೆ ಮೋಕ್ಷ ಸಿಗಲಿ ಎಂಬ ನಂಬಿಕೆಯಿಂದ ದಕ್ಷಿಣ ಕಾಶಿ ಖ್ಯಾತಿಯ ತೃಕ್ಕನ್ನಾಡು ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಸಾವಿರಾರು ಭಕ್ತರು ಪಿತೃತರ್ಪಣ ಹಾಗೂ ಬಲಿತರ್ಪಣ ನೆರವೇರಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಮುಂಜಾನೆ 4 ಗಂಟೆಯಿಂದಲೇ ದೇವಸ್ಥಾನಕ್ಕೆ ಆಗಮಿಸಿದ್ದು, ಬೆಳಗ್ಗೆಯಿಂದಲೇ ದೇವಸ್ಥಾನದ ಒಳಾಂಗಣ ಹಾಗೂ ಹೊರಭಾಗದಲ್ಲಿ ಭಕ್ತರ ಉದ್ದನೆಯ ಸರತಿ ಕಂಡುಬಂತು.

ದೇವಸ್ಥಾನದಲ್ಲಿ ಸುಮಾರು 20 ಮಂದಿ ಪುರೋಹಿತರು ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಿದರು. ದೇವಸ್ಥಾನದ ದಕ್ಷಿಣ ಭಾಗದಲ್ಲಿ ಬಲಿತರ್ಪಣಕ್ಕಾಗಿ ವಿಶೇಷ ಬಲಿತಟ್ಟು ಹಾಗೂ ಪೆಂಡಾಲ್‌ಗಳನ್ನು ಸಿದ್ಧಪಡಿಸಲಾಗಿತ್ತು. ಪೆಂಡಾಲ್‌ನಲ್ಲಿ ಸ್ಥಳಾವಕಾಶದ ಕೊರತೆ ಉಂಟಾದ ಹಿನ್ನೆಲೆಯಲ್ಲಿ ಸಮೀಪದ ದೇವಸ್ಥಾನದ ಅಗ್ರಶಾಲೆಯಲ್ಲೂ ಐವರು ಪುರೋಹಿತರ ನೇತೃತ್ವದಲ್ಲಿ ಬಲಿತರ್ಪಣ ನೆರವೇರಿಸಲಾಯಿತು.

ಬೆಳಿಗ್ಗೆ 5ರಿಂದ 8 ಗಂಟೆಯವರೆಗೆ ಕೌಂಟರ್‌ಗಳ ಮೂಲಕ ಬಲಿತರ್ಪಣ ಹಾಗೂ ಕಾಣಿಕೆ ಸಲ್ಲಿಕೆಗೆ ರಶೀದಿ ವಿತರಿಸಲಾಯಿತು. ದೇವಸ್ಥಾನದಿಂದ ಬೇಕಲ್ ಪೊಲೀಸ್ ಠಾಣೆವರೆಗೆ ಭಕ್ತರ ಉದ್ದನೆಯ ಸರತಿ ಕಂಡುಬಂತು. ಬಲಿತರ್ಪಣದ ಬಳಿಕ ಭಕ್ತರು ಸಮುದ್ರತೀರಕ್ಕೆ ತೆರಳಿ ಕಾಗೆಗಳಿಗೆ ಬಲಿ ಅರ್ಪಿಸಿದರು. ಸಮುದ್ರದ ನೀರನ್ನು ಮೂರು ಬಾರಿ ತಲೆಯ ಮೇಲೆ ಸಿಂಪಡಿಸಿಕೊಂಡು, ಬಳಿಕ ದೇವಸ್ಥಾನದ ಕೊಳದಲ್ಲಿ ಸ್ನಾನ ಮಾಡಿ ಬಟ್ಟೆ ಬದಲಿಸಿಕೊಂಡು ದೇವಸ್ಥಾನದ ಆವರಣಕ್ಕೆ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು.

ಭಕ್ತರ ಸುರಕ್ಷತೆಗಾಗಿ ಪೊಲೀಸರು, ಕರಾವಳಿ ಕಾವಲು ಪಡೆ, ಆರೋಗ್ಯ ಇಲಾಖೆ, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ, ಮೀನುಗಾರರು, ದೇವಸ್ಥಾನ ಆಚರಣಾ ಸಮಿತಿ, ಮಾತೃ ಸಮಿತಿ ಹಾಗೂ ಆಡಳಿತ ಸಮಿತಿಯವರು ನಿಯೋಜಿತರಾಗಿದ್ದರು. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದ್ದ ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಕರಾವಳಿ ಕಾವಲು ಪಡೆ ಸಿಬ್ಬಂದಿ ಭಕ್ತರಿಗೆ ಸಮುದ್ರದ ನೀರನ್ನು ಕೈಯಲ್ಲಿ ತೆಗೆದುಕೊಂಡು ತಲೆಯ ಮೇಲೆ ಸಿಂಪಡಿಸಿಕೊಳ್ಳಲು ನೆರವಾಗುವ ಮೂಲಕ ಸುರಕ್ಷತಾ ಕ್ರಮಗಳನ್ನು ಕೈಗೊಂಡರು.

ದೇವಸ್ಥಾನಕ್ಕೆ ಆಗಮಿಸಿದ ಭಕ್ತರಿಗೆ ತಿಂಡಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕರ್ಕಾಟಕ ವಾವ್‌ ಆಚರಣೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಬಲಿತರ್ಪಣಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.

SHARE
Loading spinner

Leave a Reply

Your email address will not be published. Required fields are marked *

error: Content is protected !!