ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ತಾಲೂಕಿನ ಪೆರಬೆ ಗ್ರಾಮದ ಎರ್ಮಾಳ ಅರಣ್ಯದಲ್ಲಿ ಗುರುವಾರ ರಾತ್ರಿ ನಡೆದಿದೆ.

ಆತ್ಮ ಹತ್ಯೆ ಮಾಡಿಕೊಂಡವರನ್ನು ಪೆರಾಬೆ ಗ್ರಾಮದ ಇಡಾಳ ಕೋಡಿಯಡ್ಕ ನಿವಾಸಿ ಶೇಖರ ಗೌಡ(೪೪) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಸಂಸಾರದಲ್ಲಿ ಒಡಕು ಮೂಡಿ ಪತಿ ಹಾಗೂ ಪತ್ನಿ ಮಧ್ಯೆ ಸಂಘರ್ಷ ಉಂಟಾಗಿತ್ತು.


ಇದರಿಂದ ಮನನೊಂದು ಆತ್ಮ ಹತ್ಯೆ ಮಾಡಿಕೊಂಡಿರುವುದಾಗಿ ಮೃತರ ಸಹೋದರ ಗಂಗಾಧರ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಆತ್ಮ ಹತ್ಯೆ ಮಡಿಕೊಂಡಿರುವ ಶೇಖರ ಗೌಡ ಸಾಮಾಜಿಕವಾಗಿ ಗುರುತಿಸಿಕೊಂಡಿದ್ದು, ಗುರುವಾರ ರಾತ್ರಿ ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆದ ಭಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾತ್ರಿ ಎರ್ಮಾಳದಲ್ಲಿರುವ ತನ್ನ ಅಕ್ಕನ ಮನೆಯ ಪಕ್ಕದಲ್ಲಿ ಬೈಕ್ ನಿಲ್ಲಿಸಿ , ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿ ಬದಿಯ ಎರ್ಮಾಳ ಅರಣ್ಯ ಪ್ರದೇಶಕ್ಕೆ ಸುಮಾರು ಒಂದೂವರೆ ಕಿಲೋಮೀಟರ್ ದೂರ ಕಾಡಿನಲ್ಲಿ ನಡೆದು ಹೋಗಿ ಅಲ್ಲಿ ಮರವೊಂದಕ್ಕೆ ತನ್ನ ಹೆಗಲ ಮೇಲಿದ್ದ ಕೇಸರಿ ಶಾಲ್ಗೆ ದೇವಸ್ಥಾನದಲ್ಲಿ ಸಿಕ್ಕಿದ್ದ ಕೇಸರಿ ಶಾಲ್ ನ್ನು ಜೋಡಿಸಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡಿದ್ದಾರೆ. ರಾತ್ರಿ ಮನೆಗೆ ಬಾರದೆ ಇರುವುದರಿಂದ ಮನೆಯವರು ರಾತ್ರಿ ಕಡಬ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ತನ್ನ ಅಕ್ಕನ ಮನೆಯ ಪಕ್ಕ ಬೈಕ್ ನಿಲ್ಲಿ ಸಿರುವುದರಿಂದ ಅದೇ ಪರಿಸರದಲ್ಲಿ ಊರಿನ ಜನ ಹುಡುಕಾಟ ನಡೆಸಿದಾಗ ಕಾಡಿನಲ್ಲಿ ಮೃತ ದೇಹ ಪತ್ತೆಯಾಗಿದೆ. ಕಡಬ ಠಾಣಾಧಿಕಾರಿ ಜಂಬುರಾಜ್ ಮಹಾಜನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಿಗೆ ಪತ್ನಿ, ಪುತ್ರ ಹಾಗೂ ಪುತ್ರಿ ಇದ್ದಾರೆ.

