ಉಡುಪಿ: ಜಿಲ್ಲೆ ಮತ್ತು ನಗರದ ಆಟೋ ರಿಕ್ಷಾ ಮತ್ತು ಆಟೋ ನಿಲ್ದಾಣಗಳಿಗೆ ಸಂಬಂಧಿಸಿದಂತೆ ಅ.1ರಂದು ಜಿಲ್ಲಾಧಿಕಾರಿಗಳು ಹೊರಡಿಸಿರುವ ಹೊಸ ನಡವಳಿಯಲ್ಲಿ ಕೆಲವು ಬದಲಾವಣೆ ಮಾಡಬೇಕು ಎಂದು ಆಶ್ರಯ ಆಟೋ ಯೂನಿಯನ್ ಆಗ್ರಹಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಯೂನಿಯನ್ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಅವರು, ವಲಯ-1 ಪರ್ಮಿಟ್ ಅಳವಡಿಸಿಕೊಳ್ಳಲು ಮೂರು ತಿಂಗಳ ಕಾಲಾವಕಾಶ ನೀಡಬೇಕು. ನಗರ ಪರವಾನಿಗೆ ಹೊಂದಿರುವ ಆಟೋ ಚಾಲಕನಿಗೆ ಒಂದು ಆಟೋ ಸ್ಟ್ಯಾಂಡ್ ನಲ್ಲಿ ಮಾತ್ರ ಸದಸ್ಯತ್ವ ನೀಡಬೇಕು. ಎರಡು ಕಡೆ ಇದ್ದಲ್ಲಿ ಒಂದನ್ನು ರದ್ದು ಮಾಡಬೇಕು. ನಗರದ ನಿವಾಸಿ ಆಗಿದ್ದವರಿಗೆ ಮಾತ್ರ ನಗರದಲ್ಲಿ ರಿಕ್ಷಾ ಬಾಡಿಗೆಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.
ನಗರದಲ್ಲಿ ಸುಮಾರು 5000 ರಿಕ್ಷಾ ಇದೆ. ಹಲವು ಎರಡು ಮೂರು ಕಡೆಗಳಲ್ಲಿ ಸದಸ್ಯತ್ವ ಪಡೆದಿದ್ದಾರೆ. ಇದನ್ನು ರದ್ದು ಮಾಡಬೇಕು. ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಯಾವುದೇ ಸ್ಟ್ಯಾಂಡ್ ನಿಂದ ಬಾಡಿಗೆ ಮಾಡಲು ಅವಕಾಶ ನೀಡಲಾಗಿದೆ. ಹಾಗೆಯೆ ದಿನಪೂರ್ತಿ ಖಾಲಿ ಇರುವ ಅಥವಾ 5ಕ್ಕಿಂತ ಕಡಿಮೆ ರಿಕ್ಷಾ ಇರುವ ಸ್ಟ್ಯಾಂಡ್ಗಳಲ್ಲಿ ವಲಯದ ಪರ್ಮಿಟ್ ಹೊಂದಿದವರಿಗೆ ಅವಕಾಶ ನೀಡಬೇಕು. ಹಾಗೆಯೇ ವಲಯ ವಿಂಗಡನೆಯ ಬಣ್ಣವನ್ನು ತತ್ಕ್ಷಣ ಅನುಷ್ಠಾನ ಮಾಡಬೇಕು. ಆಟೋ ಚಾಲಕರು ಕೂಡ ಸಂಯಮದಿಂದ ವರ್ತಿಸಬೇಕು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಯೂನಿಯನ್ ಉಪಾಧ್ಯಕ್ಷ ಎಂ.ಹನೀಫ್ ಮಣಿಪುರ, ಸಲಹೆಗಾರ ವಿಠಲ ಕೊಡಂಕೂರು, ಸದಸ್ಯರಾದ ನಾಗರಾಜ, ಸತೀಶ್ ಇದ್ದರು.