ಕಾವೂರು: ರಂಗ ಸ್ವರೂಪ (ರಿ.) ಕುಂಜತ್ತಬೈಲ್ ಆಯೋಜಿಸಿದ ರಂಗೋತ್ಸವ 2026′ 4ದಿನಗಳ ಕಾಲ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಮರಕಡ ಸರಕಾರಿ ಶಾಲಾ ಆವರಣದಲ್ಲಿ ನಡೆಯಿತು.
ಓಷಿಯನ್ ಕನ್ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್ನ ನಿರ್ದೇಶಕ ಇನಾಯತ್ ಅಲಿ ರಂಗೋತ್ಸವ 2026′ ಬೇಸಿಗೆ ಶಿಬಿರದ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಇಂದಿನ ಮೊಬೈಲ್ ಯುಗದಲ್ಲಿ ಮಕ್ಕಳಿಗೆ ಇಂತಹ ರಂಗ ತರಬೇತಿ ಮತ್ತು ಕಲೆಗಳ ಮೂಲಕ ಸಂಸ್ಕಾರ ನೀಡುವುದು ಅತ್ಯಂತ ಅಗತ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ಮರಕಡ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ಭವಾನಿ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಸೇವೆಯನ್ನು ಗುರುತಿಸಿ “ರಂಗೋತ್ಸವ 2026′ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಸ್ವೀಕರಿಸಿ ಶಿಕ್ಷಕಿ ಭವಾನಿ ಮಾತನಾಡಿ ನನ್ನ ವೃತ್ತಿ ಜೀವನದಲ್ಲಿ ಮಕ್ಕಳೊಂದಿಗೆ ಕಳೆದ ಕ್ಷಣಗಳೇ ಅತ್ಯಂತ ಅಮೂಲ್ಯ. ಇಂದು ರಂಗ ಸ್ವರೂಪ ಸಂಸ್ಥೆಯು ನನ್ನನ್ನು ಗುರುತಿಸಿ ಗೌರವಿಸಿರುವುದು ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ. ಮಕ್ಕಳಿಗೆ ಕಲೆಯ ಮೂಲಕ ಜೀವನದ ಪಾಠ ಕಲಿಸುವುದು ಅತೀ ಮುಖ್ಯ ಎಂದು ಹೇಳಿದರು.
ಪರಿಸರ ವಾದಿ ದಿನೇಶ್ ಹೊಳ್ಳಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರಲು ಇಂತಹ ಬೇಸಿಗೆ ಶಿಬಿರಗಳು ಉತ್ತಮ ವೇದಿಕೆಯಾಗಿವೆ. ಕೇವಲ ಪಠ್ಯ ಪುಸ್ತಕದ ಶಿಕ್ಷಣ ಮಾತ್ರವಲ್ಲದೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ರಂಗ ಸ್ವರೂಪ ಸಂಸ್ಥೆಯು ಹಮ್ಮಿಕೊಂಡಿರುವ ಈ ಕೆಲಸ ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು.
ಮಹಾನಗರ ಪಾಲಿಕೆಯ ಮಾಜಿ ಸದಸ್ಯ ಶರತ್ ಕುಮಾರ್, ಮರಕಡ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕಿ ಶೋಭಾ ಅತಿಥಿಗಳಾಗಿ ಭಾಗವಹಿಸಿದರು. ರಂಗ ಸ್ವರೂಪ ಸಂಸ್ಥೆಯ ಅಧ್ಯಕ್ಷ ರೆಹಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಝುಬೇರ್ ಖಾನ್ ಕುಡ್ಲ ಸ್ವಾಗತಿಸಿದರು.
ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಕಾಸರಗೋಡು ವಂದಿಸಿದರು. ಪ್ರೇಮನಾಥ್ ಮರ್ಣೆ ಮತ್ತು ತಸ್ಲೀಮಾ ಬಾನು ಹನೀಷಾ ಸವಾದ್ ಕಾರ್ಯಕ್ರಮ ನಿರೂಪಿಸಿದರು.


