ಮಂಗಳೂರು ವಿಶ್ವವಿದ್ಯಾನಿಲಯದ ಅನ್ವಯಿಕ ಪ್ರಾಣಿ ಶಾಸ್ತ್ರ ವಿಭಾಗ ಹಾಗೂ ನ್ಯಾಚುರಲ್ ಹಿಸ್ಟರಿ ಅಸೋಸಿಯೇಷನ್ ವತಿಯಿಂದ ಜೀವ ವೈವಿಧ್ಯತಾ ದಿನದ ಅಂಗವಾಗಿ ಮೇ 22 ಮತ್ತು 23ರಂದು “ವೈವಿಧ್ಯ-2026” ಹೆಸರಿನ ಎರಡು ದಿನಗಳ ರಾಷ್ಟ್ರೀಯ ಮಟ್ಟದ ಅಂತರ್ ಕಾಲೇಜು ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾನಿಲಯದ ಡೀನ್ ಪ್ರೊ. ಮಂಜಯ್ಯ ವಹಿಸಿದ್ದರು. ಶಿಕ್ಷಣ ತಜ್ಞ ಹಾಗೂ ಪರಿಸರ ಸಂರಕ್ಷಣಾವಾದಿ ದೇವಿ ಪ್ರಸಾದ್ ಕೆ.ಎನ್ ಮುಖ್ಯ ಅತಿಥಿಯಾಗಿ ಮಾತನಾಡಿ, ಜೀವ ವೈವಿಧ್ಯತೆ ಮತ್ತು ಅದರ ಸಂರಕ್ಷಣೆ ಕುರಿತು ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು. ಪರಿಸರದಲ್ಲಿ ಸಸ್ಯ ಮತ್ತು ಪ್ರಾಣಿಗಳ ಸಮತೋಲನ ಕಾಪಾಡುವುದು ಅಗತ್ಯವೆಂದರು.
ವಿಭಾಗದ ಅಧ್ಯಕ್ಷ ಪ್ರೊ. ಎಂ.ಎಸ್. ಮುಸ್ತಾಕ್, ನ್ಯಾಚುರಲ್ ಹಿಸ್ಟರಿ ಅಸೋಸಿಯೇಷನ್ ಸಂಚಾಲಕ ಡಾ. ನರಸಿಂಹಯ್ಯ, “ವೈವಿಧ್ಯ-2026” ಸಂಚಾಲಕ ಡಾ. ಜೈಸನ್ ಸಿಕ್ವೇರಾ ಹಾಗೂ ವಿದ್ಯಾರ್ಥಿ ಸಂಚಾಲಕಿ ಸಿಂಚನ ಹೆಗ್ಡೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಲೇಖನಗಳು ಹಾಗೂ ಸಾಂಸ್ಕೃತಿಕ ಬರಹಗಳನ್ನು ಒಳಗೊಂಡ ‘ಫೂಟ್ ಪ್ರಿಂಟ್’ ಮ್ಯಾಗಜಿನ್ ಬಿಡುಗಡೆಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ರಸಪ್ರಶ್ನೆ, ಚರ್ಚಾ ಸ್ಪರ್ಧೆ, ರಂಗೋಲಿ, ರೀಲ್ ಮೇಕಿಂಗ್ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಿತು. ‘ಬಯೋ ಬಜಾರ್’ ಸ್ಟಾಲ್ಗಳು ಹಾಗೂ ವಿದ್ಯಾರ್ಥಿಗಳು ಸೆರೆಹಿಡಿದ ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿತ್ತು.
ಕರ್ನಾಟಕ ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಎಸ್.ಎಂ. ಶಿವಪ್ರಕಾಶ್ “ಪ್ರಕೃತಿಯೇ ದೇವರು” ಎಂಬ ಸಂದೇಶ ನೀಡಿದರು. ಸಂಶೋಧಕ ಡಾ. ನಚಿಕೇತ್ ಶರ್ಮಾ ಆನೆಗಳ ವರ್ತನೆ ಕುರಿತು ಮಾಹಿತಿ ಹಂಚಿಕೊಂಡರು. ಲಯನಾ ಟ್ರಸ್ಟ್ ವತಿಯಿಂದ ಹಾವುಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ಪ್ರಾತ್ಯಕ್ಷಿಕೆ ನಡೆಸಲಾಯಿತು.
ಸಮಾರೋಪ ಸಮಾರಂಭದಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಆರ್.ಎಂ. ಗೊಗೇರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು. ಹಳೆಯ ವಿದ್ಯಾರ್ಥಿಗಳ ಸಮಾಗಮ ಕಾರ್ಯಕ್ರಮವೂ ನಡೆದಿದ್ದು, ಹಳೆ ವಿದ್ಯಾರ್ಥಿಗಳ ಸಂಘ ರಚನೆ ಕುರಿತು ಚರ್ಚೆ ನಡೆಯಿತು.
ಮಂಗಳೂರು ವಿಶ್ವವಿದ್ಯಾನಿಲಯ ಹಾಗೂ ವಿವಿಧ ಕಾಲೇಜುಗಳಿಂದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.