ರಾಜ್ಯಕ್ಕೆ ರ್ಯಾಂಕ್ ತಂದ ಚಿನ್ಮಯ್ ಜಿ.ಕೆ. ಸಹಿತ ಇತರ ಸಾಧಕರಿಗೆ ಸಮ್ಮಾನ

ಪರಕಾಯ ಪರಿಶ್ರಮದಿಂದ ಎಲ್ಲವೂ ಸಿದ್ಧಿಸುತ್ತದೆ

ಬೆಳ್ತಂಗಡಿ, ಜೂ.20: ನಮ್ಮ ಸಾಧನೆಯೇ ಪರಿಶ್ರಮವಾಗಿ ಪರಿವರ್ತನೆಯಾದಾಗ ನಾವು ಅಂದುಕೊಂಡ ಯೋಜನೆ ನಿಶ್ಚಲವಾಗಿ ಕಾರ್ಯಗತವಾಗಲು ಸಾಧ್ಯವಿದೆ. ಇದಕ್ಕೆ ಸಿಇಟಿ ಯಲ್ಲಿ ರಾಜ್ಯಕ್ಕೆ 7ನೇ ರ್ಯಾಂಕ್ ಪಡೆದ ಚಿನ್ಮಯ್ ಜಿ.ಕೆ.ಯೇ ಒಂದು ಪ್ರತಿಷ್ಠಿತ ಉದಾಹರಣೆ ಎಂದು ವಿದ್ವತ್ ಪಿಯು ಕಾಲೇಜಿನ ಅಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿ ಹೇಳಿದರು.

ಸಿಇಟಿಯಲ್ಲಿ ರಾಜ್ಯಕ್ಕೆ 7 ನೇ ರ್ಯಾಂಕ್ ಪಡೆದ ವಿದ್ವತ್ ಪಿಯು ಕಾಲೇಜಿನ ಚಿನ್ಮಯ್ ಜಿ.ಕೆ. ಹಾಗೂ ಬೋರ್ಡ್, ಜೆಇಇ ಸೇರಿದಂತೆ ಇತರೆ ಸಾಧಕ ವಿದ್ಯಾರ್ಥಿಗಳನ್ನು ಕಾಲೇಜು ಪ್ರಾಂಗಣದಲ್ಲಿ ಜೂ.20 ರಂದು ನಡೆದ ಸಮಾರಂಭದಲ್ಲಿ ಸಮ್ಮಾನಿಸಿ ಮಾತನಾಡಿದರು.

ಎರಡು ವರ್ಷಗಳ ಹಿಂದೆ ಕಟ್ಟಡ ರಚನೆ ಹಂತದಲ್ಲಿದ್ದ ನಮ್ಮ ಕಾಲೇಜಿನ ವ್ಯವಸ್ಥೆ ಕಂಡು ನಿರಾಸೆ ಹೊಂದದೆ,‌ ಅತ್ಯಂತ ನಿರೀಕ್ಷೆಯಿಟ್ಟು ಪೋಷಕರು ತಮ್ಮ ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿದ್ದರು. ಅವರ ನಿರೀಕ್ಷೆಗೆ ತಕ್ಕಂತೆ ನಾವು ಫಲಿತಾಂಶ ನೀಡಿರುವುದು ನಮಗೆ ತೃಪ್ತಿಯಿದೆ. ಈ ಸಮಯಕ್ಕೆ ಶಿಕ್ಷಕರು ಹಾಗೂ ಕಾಲೇಜಿನ ಪ್ರತಿಯೊಬ್ಬರ ಪರಿಶ್ರಮವನ್ನು ಕೃತಜ್ಞತಾ ಪೂರ್ವಕವಾಗಿ ಸ್ಮರಿಸುತ್ತೇನೆ. ಭವಿಷ್ಯದಲ್ಲಿ ನಮ್ಮ ಕಾಲೇಜು ಮತ್ತಷ್ಟು ಸಾಧಕರಿಗೆ ವೇದಿಕೆಯಾಗಲಿ ಎಂಬುದು ನಮ್ಮ ಆಶಯವಾಗಿದೆ ಎಂದರು.

ಪೋಷಕರ ಪರವಾಗಿ ಮಾತನಾಡಿದ ಚಿನ್ಮಯ್ ಜಿ.ಕೆ. ಅವರ ತಂದೆ ಗಣೇಶ್ ಭಟ್, ಎರಡು ವರ್ಷಗಳ ವಿದ್ವತ್ ಪಯಣ ಅತ್ಯಂತ ಸಂತಸ ತಂದಿದೆ. ಚಿನ್ಮಯ್ ನಂತೆ ಈ ಸಾಧನೆಯ ವೇದಿಕೆಗೆ ಏರಲು ಎಲ್ಲರಿಗೂ ಅವಕಾಶವಿದೆ. ಆದರೆ ನೀವು ಸಮಯ ನೀಡಬೇಕು. ದ.ಕ. ಜಿಲ್ಲೆಯಲ್ಲಿ ಅನೇಕ ಪಿಯು ಕಾಲೇಜುಗಳಿವೆ ಆದರೆ ಅವೆಲ್ಲವನ್ನೂ ಮೀರಿ ವಿದ್ವತ್ ಪಿ.ಯು. ಕಾಲೇಜು ಈ ಸಾಧನೆ ಮಾಡಿದೆ ಎಂದರೆ ಇಲ್ಲಿನ ಶಿಕ್ಷಕರ ಪರಿಶ್ರಮವೇ ಕಾರಣ. ಹಾಗಾಗಿ ನಮ್ಮ ಕುಟುಂಬದ ಪರವಾಗಿ ವಿದ್ವತ್ ಕಾಲೇಜಿಗೆ ಕೃತಜ್ಞತೆ ಸಲ್ಲಿಸುವೆ ಎಂದರು.

ವಿದ್ವತ್ ಪಿ.ಯು.ಕಾಲೇಜಿನ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ್ ಇ.ಎಂ. ಮಾತನಾಡಿ, ಸಾಧಕ ಮಕ್ಕಳು ಶೈಕ್ಷಣಿಕವಾಗಿ ಕಲ್ಲು ಭಂಡೆಯಂತೆ ಪರಿವರ್ತನೆಯಾದ ಫಲವಾಗಿ ಎಷ್ಟೇ ಕಷ್ಟಗಳು ಎದುರಾದರು ಅಂಕ ಗಳಿಸುವವರೆಗೆ ವಿರಮಿಸಿಲ್ಲ. ಶೈಕ್ಷಣಿಕವಾಗಿ ವಿದ್ವತ್ ಸದಸ್ಯರು ಒಂದು ಕುಟುಂಬದಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದು ಫಲಿತಾಂಶದ ಮೂಲಕ ಪ್ರಕಟವಾಗಿದೆ. ಮುಂದಿನ ನೀಟ್ ಪರೀಕ್ಷೆಗೆ ಸಿದ್ಧರಾಗಿರುವ ಎಲ್ಲರಿಗೂ ಶುಭ ಹಾರೈಸುತ್ತಾ ಮಗದೊಂದು ಮೈಲಿಗಲ್ಲಿನ ಕ್ಷಣಕ್ಕಾಗಿ ನಾವು ಕಾತುರರಾಗಿದ್ದೇವೆ ಎಂದ ಅವರು ಎಲ್ಲ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.

ವಿದ್ಯಾರ್ಥಿಗಳನ್ನು ಗುರು ಕಂಡಂತೆ ಎಂಬ ವಿಚಾರವಾಗಿ ಕಾಲೇಜಿನ ಗಣಿತ ವಿಭಾಗ ಮುಖ್ಯಸ್ಥರಾದ ರಂಗನಾಥ್ ಆರ್. ಮಾತನಾಡಿ, ಯಾವುದೇ ಸಾಧಕ ವಿದ್ಯಾರ್ಥಿಗಳಿಗೆ ಬೇಕಾಗಿರುವುದು ಸಮಯ ಪಾಲನೆ ಹಾಗೂ ಪರಿಶ್ರಮ. ಚಿನ್ಮಯ್ ಜಿ.ಕೆ. ಅಹಂ ಇಲ್ಲದ ಸರಳತೆಯ ಪ್ರತೀಕ. ಜತೆಗೆ ತನಶ್ರೀ, ಸಂಪತ್ ಕುಮಾರ್ ಪುಟ್ಟಿ, ಮನೀಶ್ ಡಿ., ಪ್ರಥಮ್ ಆರ್.ಗೋಖಲೆ, ಪ್ರತೀಕ್ ವಿ.ಎಸ್. ಅವರ ಸರಳತೆ, ನಿರಂತರವಾದ ಕಲಿಕೆ ಹಾಗೂ ಸೃಜನಶೀಲ ಶಕ್ತಿಯಿಂದ ಸಾಧನೆ ಶಿಖರವೇರಲು ಸಾಧ್ಯವಾಗಿದೆ ಎಂದು ಪ್ರಶಂಸಿದರು.

ಸಾಧಕ ವಿದ್ಯಾರ್ಥಿಗಳಾದ ಚಿನ್ಮಯ್ ಜಿ.ಕೆ., ಅವರಿಗೆ ಲ್ಯಾಪ್ ಟಾಪ್ ನೀಡಿ ವಿಶೇಷವಾಗಿ ಸನ್ಮಾನಿಸಲಾಯಿತು. ಜತೆಗೆ ಜೆಇಇ ಸಾಧಕರಾದ ತನುಶ್ರೀ, ಸಂಪತ್ ಕುಮಾರ್ ಪುಟ್ಟಿ, ಮನೀಶ್ ಡಿ., ಪ್ರಥಮ್ ಆರ್.ಗೋಖಲೆ, ಪ್ರತೀಕ್ ವಿ.ಎಸ್. ಹಾಗೂ ಪೋಷಕರನ್ನು ಕಾಲೇಜು ವತಿಯಿಂದ ಸಮ್ಮಾನಿಸಲಾಯಿತು.

ವಿದ್ವತ್ ಪಿಯು ಕಾಲೇಜಿನ ಕಾರ್ಯದರ್ಶಿ ಪ್ರಜ್ವಲ್ ರೈ, ಖಜಾಂಚಿ ಎಂ.ಕೆ.ಕಾಶಿನಾಥ್, ಪ್ರಾಂಶುಪಾಲರಾದ ಬಾಲಕೃಷ್ಣ ನಾಯ್ಕ್, ಆಡಳಿತ ಅಧಿಕಾರಿ ಅಶೋಕ್ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ರಸಾಯನಶಾಸ್ತ್ರ ವಿಭಾಗ ಮುಖ್ಯಸ್ಥರಾದ ಪ್ರತಾಪ್ ಬಾಬು ಡಿ.ಎಂ. ಪ್ರಾಸ್ತಾವಿಸಿ, ಸ್ವಾಗತಿಸಿದರು. ಕಾರ್ಯಕ್ರಮವನ್ನು ಕನ್ನಡ ವಿಭಾಗ ಮುಖ್ಯಸ್ಥರಾದ ನೀಲಕಂಠ ನಿರೂಪಿಸಿದರು. ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಮಹಿತಾ ಕುಮಾರಿ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅನುಶ್ರೀ ಎನ್. ಸಾಧಕರನ್ನು ಪರಿಚಯಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿ ಅಕ್ಷತಾ ಶೆಟ್ಟಿ, ಗಣಿತಶಾಸ್ತ್ರ ವಿಭಾಗದ ಉಪನ್ಯಾಸಕಿ ಹೇಮಾವತಿ ಬಿ.ಎಂ. ವಿವಿಧ ವಿಭಾಗದ ಉಪನ್ಯಾಸಕರು ಕಾರ್ಯಕ್ರಮ ಸಂಯೋಜಿಸಿದರು.

SHARE
Loading spinner

Leave a Reply

Your email address will not be published. Required fields are marked *

error: Content is protected !!